ಡಿಸೆಂಬರ್ 21 ರಿಂದ ಕರಾವಳಿ ಉತ್ಸವ

(ನ್ಯೂಸ್ ಕಡಬ) newskadaba.com ಡಿ. 10. ಬಹುನಿರೀಕ್ಷಿತ ಕರಾವಳಿ ಉತ್ಸವವು ಡಿಸೆಂಬರ್ 21ರಿಂದ ಮಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಸೋಮವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

ಡಿಸೆಂಬರ್ 21ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಸಂಸ್ಕೃತಿ, ಭಾಷೆ, ವೈವಿಧ್ಯಮಯ ಆಚರಣೆಗಳನ್ನು ಪ್ರದರ್ಶಿಸಬೇಕು. ವಿವಿಧ ಅಕಾಡೆಮಿಗಳೊಂದಿಗೆ ಸೇರಿ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಡಿಸೆಂಬರ್ 28 ಹಾಗೂ 29ರಂದು ಪಣಂಬೂರು/ತಣ್ಣೀರುಬಾವಿ ಬೀಚ್‍ ನಲ್ಲಿ ಬೀಚ್ ಉತ್ಸವ ನಡೆಯಲಿದೆ. ಜನವರಿ 4 ಮತ್ತು 5 ರಂದು ಕದ್ರಿಪಾರ್ಕ್‍ ನಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿ, ಯುವ ಸಮೂಹದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ “ಯುವ ಉತ್ಸವ” ನಡೆಯಲಿದೆ. ಜನವರಿ 17 ಮತ್ತು 18 ರಂದು ಆಕರ್ಷಕ ಗಾಳಿಪಟ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ವೈವಿಧ್ಯಮಯ ತಿಂಡಿ-ತಿನಿಸುಗಳ ಆಹಾರ ಮೇಳವನ್ನು ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

Also Read  ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

ಪ್ರಕೃತಿ ಮತ್ತು ನದಿನೀರು ಸೌಂದರ್ಯವನ್ನು ಆಸ್ವಾಧಿಸಲು ನದಿಉತ್ಸವ ಕಾರ್ಯಕ್ರಮವನ್ನು ಹರೇಕಳದಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕರಾವಳಿ ಉತ್ಸವ ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ತಕ್ಷಣದಿಂದಲೇ ಸಮಿತಿಯವರು ಕಾರ್ಯಪ್ರವೃತ್ತರಾಗಿ ಸಾಗಬೇಕೆಂದು ಅವರು ಸೂಚಿಸಿದರು. ಈ ಸಲ ಕರಾವಳಿ ಉತ್ಸವದಲ್ಲಿ ಹಿಂದಿಗಿಂತಲೂ ವಿಭಿನ್ನವಾಗಿ ಜನಾಕರ್ಷಣೆಯ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ವೃತ್ತಿಪರ ಕಲಾಸಾಧಕರನ್ನು ಒಳಗೊಂಡ ಕಾರ್ಯಕ್ರಮದ ರೂಪುರೇಷೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಆನಂದ್ ಕೆ.,  ಡಿಸಿಪಿ ಸಿದ್ದಾರ್ಥ್ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಮೂಡ ಆಯುಕ್ತ ನೂರ್ ಜಹಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top