ಭಾರತದಲ್ಲಿ ಇದೇ ಮೊದಲು ಅನ್ನದಾತರಿಗಾಗಿ ರೈತರ ಶಾಲೆ ಆರಂಭ

(ನ್ಯೂಸ್ ಕಡಬ) newskadaba.com .22 ಮಂಡ್ಯ: ಯುವಜನತೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಮತ್ತು ವಿದ್ಯಾವಂತರನ್ನು ವ್ಯವಸಾಯದೆಡೆಗೆ ಆಕರ್ಷಿಸಲು, ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರಿಗಾಗಿ ‘ರೈತರ ಶಾಲೆ’ ತೆರೆಯಲು ಶಿಕ್ಷಕರ ಗುಂಪೊಂದು ಮುಂದಾಗಿದೆ. ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ತೆಗೆದುಕೊಳ್ಳಲು ಉತ್ಸುಕರಾಗಿರುವವರನ್ನು ಸಬಲೀಕರಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ಗುಂಪು, ರೈತ ಕುಟುಂಬದ ಎಲ್ಲ ಶಿಕ್ಷಕರು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಕಳೆದ ವರ್ಷದ ಬರ ಹಾಗೂ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರೈತರ ಸಂಕಷ್ಟಗಳನ್ನು ನೋಡಿ ಮತ್ತು ವಿವಿಧ ಸಮಸ್ಯೆಗಳನ್ನು ಪರಿಗಣಿಸಿ ಶಾಲೆಯನ್ನು ತೆರೆಯಲು ನಿರ್ಧರಿಸಿದರು. ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ರೀತಿಯಲ್ಲಿಯೂ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ತಂಡದ ಪ್ರಮುಖ ಉದ್ದೇಶವಾಗಿದೆ. ಯುವಕರು ಉದ್ಯೋಗ ಅರಸಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ಹಾಗೂ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.ಈ ತಂಡವು 200ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದೆ. ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರಿಂದ ಅವರಿಗೆ ನೆರವು ಕೊಡಿಸಲು ಮುಂದಾಗಿದೆ. ರೈತರಿಗೆ ಶಿಕ್ಷಣ ನೀಡುವುದರ ಹೊರತಾಗಿ, ತರಬೇತಿ ಶಿಬಿರಗಳು, ಕ್ಷೇತ್ರ ಭೇಟಿ ಮತ್ತು ‘ರೈತರ ಶಾಲೆ’ಯಲ್ಲಿ ತಜ್ಞರಿಂದ ಅಧಿವೇಶನಗಳನ್ನು ನಡೆಸಲು ತಂಡ ಉತ್ಸುಕವಾಗಿದೆ. ಕೆಂಪೇಗೌಡ ಒಕ್ಕಲಿಗರ ವೆಲ್‌ಫೇರ್‌ ಗ್ರೂಪ್‌’ ರಚಿಸಿದ ಬಳಿಕ ರೈತರ ಶಾಲೆಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಾಲೆಯು ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ರೈತರ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸುತ್ತದೆ. ಆಲಕೆರೆಯಲ್ಲಿ ಎರಡು ತಿಂಗಳಲ್ಲಿ ಸೆಮಿನಾರ್ ಹಾಲ್ ಮತ್ತು ಕೆಲವು ತರಗತಿ ಕೊಠಡಿಗಳು ಸಿದ್ಧಗೊಳ್ಳಲಿವೆ. ರಾಜ್ಯಾದ್ಯಂತ ಇಂತಹ ಹಲವು ಶಾಲೆಗಳನ್ನು ತೆರೆಯುವ ಯೋಜನೆ ಒಳಗೊಂಡಿದೆ ಎಂದು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group