ಎರಡೆರಡು ಬಾರಿ ಗುದ್ದಲಿ ಪೂಜೆ ನಡೆದ ರಸ್ತೆಗೆ ಕೊನೆಗೂ ಡಾಮರೀಕರಣ ಭಾಗ್ಯ ► ಗೋಳಿತ್ತಡಿ-ಏಣಿತಡ್ಕ ರಸ್ತೆ ಡಾಮರೀಕರಣ ಪ್ರಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ಕಡಬ ತಾಲೂಕಿನ ಕೊೖಲ ಹಾಗೂ ರಾಮಕುಂಜ ಗ್ರಾಮಗಳಲ್ಲಿ ಬೆಸೆದುಕೊಂಡಿರುವ ಗೋಳಿತ್ತಡಿ-ಏಣಿತಡ್ಕ ರಸ್ತೆಯ ಡಾಮರೀಕರಣ ಕಾಮಗಾರಿಯು ಹಲವು ಅಡೆತಡೆಗಳ ಬಳಿಕ ಕೊನೆಗೂ ಬುಧವಾರದಂದು ಪ್ರಾರಂಭಗೊಂಡಿದೆ.

ಕಳೆದ ಮೂರು ತಿಂಗಳಿಂದ ಒಂದಿಲ್ಲಾ ಒಂದು ಕಾರಣಕ್ಕೆ ಉದ್ದೇಶಿತ ಡಾಮರೀಕರಣ ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರು ಪಡಿಪಾಟಲು ಅನುಭವಿಸುತ್ತಿದ್ದರು. ಇದೀಗ ಡಾಮರೀಕರಣ ಕಾಮಗಾರಿ ಪ್ರಾರಂಭಗೊಂಡಿರುವ ಹಿನ್ನಲೆಯಲ್ಲಿ ಈ ಭಾಗದ ನಾಗರೀಕರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲಾ ಪಂಚಾಯಿತಿ ಇಂಜೀನಿಯರ್ ಸಂದೀಪ್ ಅವರ ಮಾರ್ಗದರ್ಶನದಲ್ಲಿ ಕಾಮಗಾರಿ ನಡೆಯುತ್ತಿದೆ. ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಸುಮಾರು 1.47 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಸುಮಾರು 49 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜಕೀಯ ಕಾರಣಕ್ಕೆ ಎರಡೆರಡು ಬಾರಿ ಗುದ್ದಲಿ ಪೂಜೆ ನಡೆದು ಕಾಮಗಾರಿ ಏನೋ ಪ್ರಾರಂಭವಾಗಿತ್ತು. ರಸ್ತೆ ಅಗೆದು, ಜಲ್ಲಿ ಹಾಕಿ ಬಿಡಲಾಗಿತ್ತು. ಇದಾದ ಹಲವು ಸಮಯಗಳಿಂದದ ಹಾಗೇ ಬಿಡಲಾಗಿತ್ತು. ಜಲ್ಲಿ ಹಾಕಿ ಡಾಮರೀಕರಣಗೊಳಿಸದೆ ಇದ್ದುದರಿಂದ ಜಲ್ಲಿ ಎಲ್ಲಾ ರಸ್ತೆಯಲ್ಲಿ ಹರವಿಕೊಂಡು ವಾಹನ ಸಂಚಾರ ಸೇರಿದಂತೆ ಪಾದಾಚಾರಿಗಳಿಗೂ ಕಂಟಕವಾಗಿ ಪರಿಣಮಿಸಿತ್ತು. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಎಡವಿ ಬಿದ್ದು, ಸಮಸ್ಯೆ ಎದುರಿಸಿದ್ದರು. ಸಣ್ಣಪುಟ್ಟ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿತ್ತು. ಇತ್ತೀಚೆಗೆ ಶಾಲಾ ವಾಹನವೊಂದು ಕೂಡಾ ಚರಂಡಿಗೆ ಬಿದ್ದಿತ್ತು.

Also Read  ವಿದ್ಯಾರ್ಥಿಗಳಿಗೆ ಡೆಂಗ್ಯೂ ಜ್ವರದ ಹರಡುವಿಕೆಯ ಬಗ್ಗೆ ಅರಿವು ಮೂಡಿಸಲು ➤ ಲಾರ್ವಾ ಕರ್ಟೂನ್ ಸ್ಪರ್ಧೆ

ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ಸಾರ್ವಜನಿಕರು ಪ್ರತಿಭಟನೆಗೆ ಸಿದ್ದತೆ ನಡೆಸಿಕೊಂಡಿದ್ದರು. ಈ ಮಧ್ಯೆ ಇಂದು, ನಾಳೆ, ಮುಂದಿನವಾರ ಡಾಮರೀಕರಣ ಮಾಡಲಾಗುವುದು ಎಂದು ಸಬೂಬು ಹೇಳುತ್ತಾ ಬರಲಾಗಿತ್ತು. ಇದೀಗ ಡಾಮರೀಕರಣ ಕಾರ್ಯ ಪ್ರಾರಂಭವಾಗಿ ನಾಗರೀಕರಲ್ಲಿ ಸಮಧಾನ ಮೂಡಿದೆ. ಬುಧವಾರ ಪ್ರಾರಂಭಗೊಂಡ ಡಾಮರೀಕರಣ ಕಾರ್ಯ ಗುರುವಾರ ಮುಕ್ತಯವಾಗಲಿದ್ದು, ಮತ್ತೆ ಸಂಚಾರಕ್ಕೆ ಮುಕ್ತವಾಗಲಿದೆ.

Also Read  ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಂಗಯ್ಯ ಅಧಿಕಾರ ಸ್ವೀಕಾರ

error: Content is protected !!
Scroll to Top