ಗಾಂಧಿ ಜಯಂತಿ: ಕಡಬ ಪಟ್ಟಣ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅ. 12. ಕಡಬ ಪಟ್ಟಣ ಪಂಚಾಯತ್, ದ.ಕ. ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಕಡಬ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಗಾಂಧೀಜಿ ಹಾಗೂ ಲಾಲ್‍ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಕಡಬ ಪಟ್ಟಣ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ. ಕಡಬ ಶ್ರೀ ಗಣೇಶ್ ಬಿಲ್ಡಿಂಗ್ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡೆ ಮಾತನಾಡಿ, ನಮಗೆ ಮುಖ್ಯವಾಗಿ ಸ್ವಚ್ಚತೆ , ಶಿಕ್ಷಣ ಹಾಗೂ ಕೌಶಲ್ಯಭರಿತ ಆರೋಗ್ಯ ಪೂರ್ಣ ಜೀವನ ಪದ್ದತಿ ಬೇಕು, ಸ್ವಚ್ಚತೆಗೆ ಪ್ರಾತಿನಿಧ್ಯ ನೀಡಬೇಕು, ಕೇಂದ್ರ ಸರಕಾರ  ಸ್ವಚ್ಚತಾ ಆಂದೋಲನ ಮೂಲಕ ಇಡೀ ದೇಶವನ್ನು ಒಗ್ಗೂಡಿಸಿ ದೇಶದಲ್ಲಿ ಕ್ರಾಂತಿಕಾರಿ ಸುಸ್ಥಿರ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ, ಪೌರ ಕಾರ್ಮಿಕರು ನಮ್ಮ ಪುರವನ್ನು  ಸಂರಕ್ಷಿಸಿ  ಸ್ವಚ್ಚತೆಯನ್ನು  ಕಾಪಾಡುವ ವೀರರು, ಅವರೊಟ್ಟಿಗೆ ಕಳೆದ ನಾಲ್ಕು ವರ್ಷಗಳಿಂದ ಕಡಬ ಗ್ಯಾರೇಜ್ ಮಾಲಕರ ಸಂಘದವರು ಕೈಜೋಡಿಸಿಕೊಂಡು  ಸ್ವಚ್ಛತಾ  ಕಾರ್ಯ ಮಾಡುತ್ತಿದ್ದು  ಅವರನ್ನು ಗೌರವಿಸುವ ಕಾರ್ಯವಾಗಬೇಕು, ಸ್ವಚ್ಚ ಮಾಡಿದ ಪ್ರದೇಶದಲ್ಲಿ ಸಾರ್ವಜನಿಕರು ಮತ್ತೆ ತ್ಯಾಜ್ಯ ಕಸ ಹಾಕದಂತೆ ಅವರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು, ಮುಂದಿನ ದಿನಗಳಲ್ಲಿ  ತಾಲೂಕು ಆಡಳಿತದ ನೇತೃತ್ವದಲ್ಲಿ  ಎಲ್ಲಾ ಇಲಾಖೆಗಳು ಹಾಗೂ ಸಂಘಟನೆಗಳ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಸ್ವಚ್ಛತಾ ಆಂದೋಲನ ನಡೆಸುವುದಕ್ಕಾಗಿ ಸಿದ್ದರಾಗೋಣ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆಗಾಗಿ ತನ್ನ ಜೀವನವನ್ನು ಸವೆಸುವ ಪೌರ ಕಾರ್ಮಿರನ್ನು ಗೌರವಿಸುವ ಕಾರ್ಯ ನಡೆಯಬೇಕು ಎಂದರು. ದ.ಕ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಕಡಬ ತಾಲೂಕು ಘಟಕದ ಗೌರವಾಧ್ಯಕ್ಷ ಸುಂದರ ಗೌಡ ಮಂಡೇಕರ ಮಾತನಾಡಿ, ನಾವು ಸಂಘಟಿತರಾಗಿ ಉತ್ತಮ ಕೆಲಸಗಳನ್ನು ಮಾಡಿ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುವಂತಾದರೆ ಅದು ಇತರರಿಗೆ ಮಾದರಿಯಾಗುತ್ತದೆ, ಈ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ನಮ್ಮ ಸಂಘವನ್ನು ಬಲಪಡಿಸಬೆಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕಡಬ ಪಟ್ಟಣ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ಸಿಬ್ಬಂದಿಗಳಾದ ವಾರಿಜಾ, ಗೀತಾ, ಶಶಿಕಲಾ, , ಗ್ಯಾರೇಜ್ ಮಾಲಕ ಸಂಘದ ಕಡಬ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಉಪಾಧ್ಯಕ್ಷ ನಿತ್ಯಾನಂದ ಗೌಡ, ಪ್ರಧಾನ ಕಾರ್ಯದರ್ಶಿ ರಾಜ್‍ಪ್ರಕಾಶ್, ಜತೆ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೋಶಾಧಿಕಾರಿ ದೇವಣ್ಣ ಗೌಡ ಸಂಪಡ್ಕ, ಜೂನಿಯರ್ ಟೆಲಿಕಾಂ ಅಧಿಕಾರಿ  ಹೇಮಂತ್ ಮಂಡೆಕರ, ಉದ್ಯಮಿ ಹಿತೇಶ್ ಮಂಡೆಕರ ಮತ್ತಿತರರು ಉಪಸ್ಥಿತರಿದ್ದರು. ಚಾರ್ವಿ ಮಂಡೆಕರ ಪ್ರಾರ್ಥಿಸಿದರು. ಪಟ್ಟಣ ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆ ಸ್ವಾಗತಿಸಿ, ವಂದಿಸಿದರು. ಪಟ್ಟಣ ಪಂಚಾಯತ್ ಸ್ವಚ್ಚತಾ ಸಿಬ್ಬಂದಿಗಳಿಗೆ ಕಡಬ ದೇವಸ್ಯ ಹೈಡ್ರೋಮೇಟಿಕ್ಸ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಚೇತನ್ ದೇವಸ್ಯ ಕೊಡಮಾಡಿದ ಕಸಹೆಕ್ಕುವ ಸಾಧನವನ್ನು ವಿತರಿಸಲಾಯಿತು. ಬಳಿಕ ಕಡಬ ತಾಲೂಕು ಕಛೇರಿ ಬಳಿಯಿಂದ ಪ್ರಾರಂಭಿಸಿ ಪೇಟೆಯಾದ್ಯಂತ ಸ್ವಚ್ಚತೆ  ಮಾಡಲಾಯಿತು.

 

error: Content is protected !!

Join the Group

Join WhatsApp Group