ಕಡಬ: ಕಂದಾಯ ಇಲಾಖೆಯಲ್ಲಿನ ದಲಿತ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ► ತಾಲೂಕು ಉದ್ಘಾಟನೆಗಾಗಿ ಆಗಮಿಸಲಿರುವ ಕಂದಾಯ ಸಚಿವರಿಗೆ ಚಪ್ಪಲಿ ಚಳವಳಿಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಕಂದಾಯ ಇಲಾಖೆ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದರ ಬಗ್ಗೆ ಕಡಬ ತಾಲೂಕು ಉದ್ಘಾಟನೆಗೆ ಆಗಮಿಸಲಿರುವ ಕಂದಾಯ ಸಚಿವರ ವಿರುದ್ಧ ಚಪ್ಪಲಿ ಚಳವಳಿ ಮಾಡಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಚಾಲಕ ಆನಂದ ಮಿತ್ತಬೈಲು ಹೇಳಿದರು.

ಅವರು ಭಾನುವಾರದಂದು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದಾಗಿ ಕಡಬ ಭಾಗದ ಅನೇಕ ದಲಿತ ಸಮುದಾಯದ ಬಡಜನರಿಗೆ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ತೀರಾ ಅನ್ಯಾಯವಾಗುತ್ತಿದೆ. ಕಡಬ ಸಮಿಪದ ಏರಂತಿಲ ನಿವಾಸಿ ಕುಂಞ ಮುಗೇರ ಎಂಬವರಿಗೆ 1975ರಲ್ಲಿ ಮಂಜೂರಾಗಿದ್ದ 2.73 ಎಕರೆ ಜಾಗದಲ್ಲಿ 40 ಸೆಂಟ್ಸ್ ಜಾಗವನ್ನು ಸರ್ವೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಮೇಲ್ವರ್ಗದವರಿಗೆ ಹಂಚಿಕೆ ಮಾಡಿದ್ದು, ಈ ಬಗ್ಗೆ ತಹಸೀಲ್ದಾರರನ್ನು ಪ್ರಶ್ನಿಸಿದರೆ ಉದ್ದಾಟತನದ ಉತ್ತರ ನೀಡುತ್ತಾರೆ. ಕಡಬ ಕಳಾರ ನಿವಾಸಿ ಪಿಜಿನ ಮುಗೇರ ಎಂಬವರಿಗೆ ಸಂಬಂಧಪಟ್ಟ ಜಾಗದಲ್ಲಿ ಇರುವ ಕಟ್ಟಡವನ್ನು ಸ್ಥಳೀಯರೊಬ್ಬರು ಪಂಚಾಯತಿಗೆ ನಕಲಿ ದಾಖಲೆ ಸೃಷ್ಟಿಸಿ ಡೋರ್ ನಂಬರ್ ಹಾಕಿಸಿಕೊಂಡಿದ್ದಾರೆ. ಮಾನವೀಯ ದೃಷ್ಟಿಯಲ್ಲಿ ಪಿಜಿನ ಮುಗೇರ ಸ್ಥಳಿಯ ವ್ಯಕ್ತಿಗೆ ತನ್ನ ಕಟ್ಟಡ ನೀಡಿದ್ದು ಅದನ್ನು ಆ ವ್ಯಕ್ತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದರು‌.

Also Read  ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತ್ಯು

ಇದು ದಲಿತ ವಿರೋದಿ ನೀತಿಯ ಪರಾಮವಧಿಯಾಗಿದ್ದು, ದಲಿತರನ್ನು ಒಡೆದು ಆಳುವ ನೀತಿಯನ್ನು ನಾವು ಇನ್ಮುಂದೆ ಸಹಿಸುವುದಿಲ್ಲ. ಕಡಬದಲ್ಲಿ ದಲಿತರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ರಾಜ್ಯ ಮಟ್ಟದಲ್ಲಿ ತಿಳಿಸುವ ಉದ್ದೇಶದಿಂದ ಕಡಬ ತಾಲೂಕು ಉದ್ಘಾಟನೆಗಾಗಿ ಆಗಮಿಸಲಿರುವ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರವರಿಗೆ ಚಪ್ಪಲಿ ತೋರಿಸಿ ಇದು ಈಗ ಕೈಗೆ ಬಂದಿದ್ದು, ಇನ್ನು ಮುಂದೆ ನಿಮ್ಮ ತಲೆಗೆ ಬರಬಹುದು ಎನ್ನುವ ಸೂಚನೆ ನೀಡುವ ಮೂಲಕ ಪ್ರತಿಭಟನೆ ಸಲ್ಲಿಸಲಾಗುವುದು ಎಂದು ಆನಂದ ಮಿತ್ತಬೈಲು ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಉಪಾಧ್ಯಕ್ಷ ಅಣ್ಣಿ ಯೆಲ್ತಿಮರ್, ದಲಿತ ಸಂಘರ್ಷ ಸಮಿತಿ(ಅಂಬೆಡ್ಕರ್ ವಾದ)ಯ ಕಡಬ ತಾಲೂಕು ಸಂಚಾಲಕ ವಸಂತ ಕುಬಲಾಡಿ, ಎಡಮಂಗಲ ಗ್ರಾ.ಪಂ.ಸದಸ್ಯ ಕಮಲಾಕ್ಷ, ದಲಿತ ಮುಖಂಡರಾದ ದಿನೇಶ್ ಬಿ ಕೊಂಬಾರು, ದ.ಸಂ.ಸ.ಸಂಘಟನಾ ಕಾರ್ಯದರ್ಶಿ ಆನಂದ ಹೊಸ್ಮಠ, ಶೇಖರ ಮರ್ವಂತಿಲ, ಅಂಬೋಡಿ ಅಲಂಗೂರು, ರಾಘವ ಕಳಾರ, ಕುಶಲ ಕಲ್ಲುಗುಡ್ಡೆ, ಸತೀಶ್ ಡಿ ಮೊದಲಾದವರು ಉಪಸ್ಥಿತರಿದ್ದರು.

Also Read  ‘ಡಿ’ ವರ್ಗ ಸರಕಾರಿ ನೌಕರರ ವಾರ್ಷಿಕ ಮಹಾಸಭೆ

error: Content is protected !!
Scroll to Top