ಆಂಬ್ಯುಲೆನ್ಸ್ ಪಲ್ಟಿ- ರೋಗಿ ಉಪ್ಪಿನಂಗಡಿಯ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 25. ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬುಲೆನ್ಸ್ ಪಲ್ಟಿಯಾದ ಪರಿಣಾಮ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯೋರ್ವರು ಮೃತಪಟ್ಟು, ಅವರ ಪತ್ನಿ, ಮಗ ಹಾಗೂ ಸಂಬಂಧಿಕರೋರ್ವ ಗಾಯಗೊಂಡ ಘಟನೆ ಮಂಗಳೂರು ಪಡೀಲು ಸಮೀಪ ನಡೆದಿದೆ.

ಮೃತ ರೋಗಿಯನ್ನು ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ದಾಸಪ್ಪ ರೈ(73) ಎಂದು ಗುರುತಿಸಲಾಗಿದೆ. ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ, ಕೂಲಿಕಾರ್ಮಿಕ ದಾಸಪ್ಪ ರೈಯವರಿಗೆ ಮಂಗಳವಾರದಂದು ತಡರಾತ್ರಿ 1.30ರ ವೇಳೆಗೆ ಸ್ಟ್ರೋಕ್ ಆಗಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಮನೆ ಸಮೀಪದ ನಿವಾಸಿ, ರಮೇಶ್ ರೈ ಎಂಬವರು ತನ್ನ ಕಾರಿನಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾಸಪ್ಪ ರೈ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಇನ್ನೋವಾ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಗಿತ್ತು. ಮುಂಜಾನೆ 4 ಗಂಟೆ ವೇಳೆಗೆ ಆಂಬುಲೆನ್ಸ್ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಘಟನೆಯಲ್ಲಿ ಆಂಬುಲೆನ್ಸ್‌ ನಲ್ಲಿದ್ದ ರೋಗಿ ದಾಸಪ್ಪ ರೈ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಪತ್ನಿ ನಳಿನಿ ರೈ, ಪುತ್ರ ಹರ್ಷಿತ್(33) ಹಾಗೂ ಸಂಬಂಧಿಕ ಯುವಕ ಮನೀಷ್(24)ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

error: Content is protected !!

Join WhatsApp Group

WhatsApp Share