ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅನೈತಿಕ ಪೋಲಿಸ್‌ಗಿರಿ – ಎಸ್‌ಡಿಪಿಐ ಆಕ್ರೋಶ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 24. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬೆಂಗಳೂರಿನಿಂದ ಹಿಂತಿರುಗುವ ಸಂದರ್ಭ ಹಿಂದೂ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತಿದ್ದನೆಂಬ ಕಾರಣಕ್ಕೆ ಮುಸ್ಲಿಂ ಯುವಕನನ್ನು ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸರ್ಕಾರಿ ಬಸ್ಸಿನ ನಿರ್ವಾಹಕ ಥಳಿಸಿದ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮೀರಾಝ್ ಸುಳ್ಯ‌ರವರು ತೀವ್ರವಾಗಿ ಖಂಡಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಬೆಂಗಳೂರಿನಿಂದ ಹಿಂತಿರುಗುವ ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ ಬಿಸಿಲೆ ಘಾಟಿಯಿಂದ ಬಸ್ ಏರಿದ ಹಿಂದೂ ಯುವತಿಯು ಯುವಕನ ಪಕ್ಕದಲ್ಲಿ ಕುಳಿತಾಗ ಯುವಕ ಅಶ್ಲೀಲ ವರ್ತನೆ ತೋರಿದ್ದಾನೆ ಎಂಬ ಆರೋಪ ಹೊರಿಸಿದಾಗ, ಸುಬ್ರಹ್ಮಣ್ಯದಿಂದ ಬಸ್‌ನಿಂದು ಇಳಿದು ಬೇರೊಂದು ಬಸ್‌ನಲ್ಲಿ ತನ್ನ ಊರಿಗೆ ಹೋಗುವಾಗ ಪೈಚಾರ್ ನಲ್ಲಿ ಬಸ್ ನ್ನು ಅಡ್ಡಗಟ್ಟಿ ಯುವಕನನ್ನು ಅಪಹರಿಸಿ ಸುಳ್ಯ ಬಸ್ ನಿಲ್ದಾಣದಲ್ಲಿ ಸುಮಾರು ಎಪ್ಪತ್ತರಷ್ಟು ಗೂಂಡಾ ಪಡೆಗಳನ್ನು ಸೇರಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನ ಪ್ರಕಾರ ನಿದ್ದೆಯ ಮಂಪರಿನಲ್ಲಿ ಬದಿಯಲ್ಲಿ ಕುಳಿತಿದ್ದ ಯವತಿಯ ಭುಜಕ್ಕೆ ತಲೆತಾಗಿದೆ ಎಂದಾಗಿದೆ. ಒಂದು ವೇಳೆ ಆ ಯುವಕ ಯುವತಿಯೊಂದಿಗೆ ಆಶ್ಲೀಲ ವರ್ತನೆ ತೋರಿದ್ದರೆ ಹಿಂದುತ್ವದ ಸಂಘಟನೆಗಳಿಗೆ ತಂಡ ಕಟ್ಟಿಕೊಂಡು ಹೋಗಿ ಗೂಂಡಾಗಿರಿ ನಡೆಸಲು ಅನುಮತಿ ಕೊಟ್ಟವರು ಯಾರು? ಇಲ್ಲಿ ಪೋಲಿಸ್ ವ್ಯವಸ್ಥೆ, ನ್ಯಾಯಾಲಯ ಇರುವುದಾದರು ಯಾಕೆ? ಎಂಬ ಪ್ರಶ್ನೆಗಳು ಏಳುತ್ತವೆ.

ಇಂತಹ ಅನೈತಿಕ ಪೋಲಿಸ್ ಗಿರಿ ಘಟನೆ ಮತ್ತೆ ಮತ್ತೆ ಮರುಕಳಿಸುತ್ತಿದ್ದರೂ ಸಹ ಪೋಲಿಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದು, ಜನರೆಡೆಯಲ್ಲಿ ಇಂತಹ ದುಷ್ಕ್ರತ್ಯಗಳು ಪುನರಾವರ್ತನೆಯಾಗಲು ಕಾರಣವಾಗಿದೆ. ಒಂದು ವೇಳೆ ಪೋಲೀಸರು FIR ದಾಖಲಿಸಿದರೂ ಸಹ ಅರೋಪಿಗಳನ್ನು ಠಾಣೆಯಲ್ಲಿಯೇ ಜಾಮೀನಿನ ಮೂಲಕ ಅಥವಾ ರಾಜಕೀಯ ಪ್ರಭಾವದಿಂದ ಬಿಡುಗಡೆಗೊಳ್ಳುವುದರಿಂದ ಗೂಂಡಾಗಳಿಗೆ ಇದು ಖಾಯಂ ಸಂಗತಿ ಎಂಬಂತಾಗಿ ಕಾನೂನಿನ ಭಯ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಲಿಸ್ ಇಲಾಖೆ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಅವರು ಒತ್ತಾಯಿಸಿದ್ದಾರೆ.

error: Content is protected !!

Join WhatsApp Group

WhatsApp Share