ಬೆಳ್ತಂಗಡಿ: ಅರಣ್ಯ ಇಲಾಖೆಯ ಬೋನಿಗೆ ಸೆರೆಸಿಕ್ಕ 2ನೇ ಚಿರತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 21. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲೆಂದು ಸವಣಾಲು ಗ್ರಾಮದ ಗುರಿಕಂಡ ಆನಂದ ಶೆಟ್ಡಿ ಎಂಬವರ ಮನೆ ಬಳಿಯಲ್ಲಿ ಇರಿಸಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದ್ದು, ಈ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬೋನಿಗೆ ಬಿದ್ದ 2ನೇ ಚಿರತೆ ಇದಾಗಿದೆ.


ಕಳೆದ ಕೆಲವು ತಿಂಗಳುಗಳಿಂದ ಗುರಿಕಂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾದ ಬಗ್ಗೆ ಇಲ್ಲಿನ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವುದಕ್ಕಾಗಿ ಬೋನು ಆಳವಡಿಸಿದ್ದರು. ಸುಮಾರು 3 ತಿಂಗಳ ನಂತರ ಸೆಪ್ಟೆಂಬರ್ 1 ರ ಮಧ್ಯರಾತ್ರಿ ಚಿರತೆ ಈ ಬೋನಿನೊಳಗೆ ಸೆರೆಯಾಗಿತ್ತು. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು. ಅದರೆ ಒಂದೇ ವಾರದೊಳಗೆ ಮತ್ತೊಂದು ಚಿರತೆ ಈ ಪರಿಸರದಲ್ಲಿ ಸುತ್ತಾಡಿದ್ದಲ್ಲದೇ ಮನೆಯೊಂದರ ಕೋಳಿಯನ್ನು ಹಿಡಿದಿತ್ತು. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಮನೆಯವರು ಅರಣ್ಯ ಇಲಾಖೆಗೆ ಮತ್ತೆ ಮಾಹಿತಿ ನೀಡಿ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ಮತ್ತೆ ಕಳೆದ ಒಂದು ವಾರಗಳ ಹಿಂದೆ ಬೋನು ಅಳವಡಿಸಲಾಗಿತ್ತು. ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೋನಿನೊಳಗೆ ಚಿರತೆ ಸೆರೆಯಾಗಿರುವುದು ತಿಳಿದುಬಂದಿದೆ.

error: Content is protected !!

Join WhatsApp Group

WhatsApp Share