ಕಡಬ ಜೇಸಿಐ ವತಿಯಿಂದ ವೃದ್ದಾಶ್ರಮಕ್ಕೆ ದೇಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 12. ನೂಜಿಬಾಳ್ತಿಲದ ಮರಿಯಾಲಯಂ ವತಿಯಿಂದ ಕಾನ್ವೆಂಟ್‌ ನಡೆಸಲ್ಪಡುವ ವೃದ್ಧಾಶ್ರಮಕ್ಕೆ ಜೇಸಿಐ ಕಡಬ ಕದಂಬದ ವತಿಯಿಂದ ದೇಣಿಗೆ ಹಸ್ತಾಂತರ ಮತ್ತು ಜೇಸಿ ಸಪ್ತಾಹ-2024ರ ಉದ್ಘಾಟನಾ ಕಾರ್ಯಕ್ರಮವು ಕಾನ್ವೆಂಟ್ ನ ಸಭಾಂಗಣದಲ್ಲಿ ನೆರವೇರಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಸಿಐ ಭಾರತದ ಸ್ಥಾಲರ್ ಶಿಪ್ ವಿಭಾಗದ ರಾಷ್ಟ್ರೀಯ ಸಂಯೋಜಕ ಕಾಶೀನಾಥ್ ಗೋಗಟೆ ಅವರು, ಜೇಸಿ ಸಂಸ್ಥೆಯು ಯುವಜನರಲ್ಲಿ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನವನ್ನು ಮಾಡುವ ಜಗತ್ತಿನ ಅತಿದೊಡ್ಡ ಸಂಘಟನೆಯಾಗಿದೆ. ಜಾಗತಿಕ ಶಾಂತಿಯನ್ನು ಸ್ಥಾಪಿಸುವಲ್ಲಿ ಯುವಜನರನ್ನು ಸಿದ್ದಪಡಿಸುವ ಮಹತ್ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯು ತರಬೇತಿ ಮತ್ತು ಸೇವಾ ಚಟುವಟಿಕೆಗಳ ಮೂಲಕ ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಿದೆ. ಸಮಾಜ ಮತ್ತು ಮನೆಯವರಿಂದ ಪರಿತ್ಯಜಿಸಲ್ಪಟ್ಟವರ ಜೀವನದಲ್ಲಿ ಒಂದಷ್ಟು ಖುಷಿ ತರುವಲ್ಲಿ ಸ್ಪಂದಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ವೃದಾಶ್ರಮದಲ್ಲಿ ನಿರಾಶ್ರಿತರು ಮತ್ತು ರೋಗಿಗಳಿಗೆ ಆಶ್ರಯ ನೀಡಿ ಅವರನ್ನು ಪೋಷಿಸುತ್ತಿರುವ ಧರ್ಮ ಭಗಿನಿಯರ ಸ್ವಾರ್ಥರಹಿತ ಸೇವಾ ಕಾರ್ಯಕ್ಕೆ ಬೆಂಬಲವಾಗಿ ಜೇಸಿ ಸಂಸ್ಥೆಯ ಸದಸ್ಯರು ತಮ್ಮಿಂದಾದ ದೇಣಿಗೆಯನ್ನು ನೀಡಿರುವುದು ಶ್ಲಾಘನೀಯ ಎಂದರು. ದೇಣಿಗೆ ಸ್ವೀಕರಿಸಿ ಮಾತನಾಡಿದ ವೃದ್ಧಾಶ್ರಮದ ಮುಖ್ಯಸ್ಥೆ ಸಿಸ್ಟರ್ ವೀಣಾ ಅವರು ಸಹೃದಯಿ ದಾನಿಗಳ ನೆರವಿನಿಂದ ಆಶ್ರಮ ನಡೆಸುತ್ತಿದ್ದೇವೆ. ನಾವು ಮಾಡುತ್ತಿರುವ ಸೇವಾ ಕಾರ್ಯಕ್ಕೆ ಜನರು ಮತ್ತು ಸಂಘ ಸಂಸ್ಥೆಗಳ ಬೆಂಬಲ ಸಿಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

Also Read  ಇದೀಗ ಮತ್ತಷ್ಟು ಹೊಸತನದೊಂದಿಗೆ "ಟಿವಿಎಸ್ ಜುಪಿಟರ್"; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ


ಜೇಸಿ ಪೂರ್ವಾಧ್ಯಕ್ಷ ರಾದ ಕೆ.ಎಸ್ ದಿನೇಶ್ ಆಚಾರ್ಯ, ತಸ್ಲೀಮ್ ಮರ್ದಾಳ, ಪದಾಧಿಕಾರಿಗಳಾದ ಹರೀಶ್ ರೈ ಮೈಲೇರಿ, ವಿಶ್ರುತಾ ರಾಜೇಶ್ ಉಪಸ್ಥಿತರಿದ್ದರು. ಜೇಸಿಐ ಕಡಬ ಕದಂಬದ ಅಧ್ಯಕ್ಷ ಝಫೀರ್ ಮಹಮ್ಮದ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಪ್ತಾಹ ನಿರ್ದೇಶಕ ರಾಜೇಶ್ ಎ.ಕೆ. ವರದಿ ವಾಚಿಸಿ, ಕಾರ್ಯದರ್ಶಿ ಜೇಮ್ಸ್ ಕ್ರಿಶಲ್ ಡಿ’ಸೋಜಾ ವಂದಿಸಿದರು.

error: Content is protected !!
Scroll to Top