“ಕಲಾವಿದನ ಕೈಚಳಕದಿಂದ ಮೂಡಿಬಂದ ವರ್ಣರಂಜಿತ ಸರಕಾರಿ ಶಾಲಾ ಗೋಡೆ”- ಪ್ರವೀಣ್ ರಾಜ್ ಕೊಯಿಲ

(ನ್ಯೂಸ್ ಕಡಬ) newskadaba.com ಕಡಬ, ಸೆ. 06. ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಯ ಗೋಡೆಗಳಿಗೆ ಸಂಪೂರ್ಣ ಬಣ್ಣ ಬಳಿದು ಆ ಗೋಡೆಗಳಲ್ಲಿ ವರ್ಣಾಲಂಕಾರ ಮಾಡುವ ಮೂಲಕ ಗಮನ ಸೆಳೆಯುವ ಕಾರ್ಯವನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಗಿದೆ.

oppo_2

ಶಾಲಾ ಪೂರ್ವವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲಾಭಿವೃದ್ದಿ ಸಮಿತಿ ಸಹಕಾರದೊಂದಿಗೆ ಸಹೃದಯಿ ದಾನಿಗಳ ನೆರವಿನಿಂದ ಶಿಕ್ಷಣ, ಕಲೆ, ನೃತ್ಯ, ಜಾನಪದ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ವೈವಿಧ್ಯಮಯ ವರ್ಣ ಚಿತ್ತಾರಗಳು, ಗೋಡೆ ಬರಹಗಳು  ಶಾಲಾ ಗೋಡೆಗಳಲ್ಲಿ ಕಲಾವಿದನ ಕೈಚಳಕದಿಂದ ಸುಂದರವಾಗಿ  ಮೂಡಿಬಂದಿವೆ.

ತುಳುನಾಡಿನ ಕಲೆಗಳು, ರಸ್ತೆಯ ಸೂಚನಾ ಫಲಕಗಳು, ಇತಿಹಾಸದ ವಿಷಯಗಳು, ನದಿಗಳ ವಿವರ, ಭಾರತೀಯ ಸೇನೆಯ ಮಾಹಿತಿ, ತರಗತಿ ಸನ್ನಿವೇಶಗಳ ಚಿತ್ರಗಳು,  ಶಿಕ್ಷಣಕ್ಕೆ ಸಂಬಂಧಪಟ್ಟ ವಿಜ್ಞಾನ, ಪರಿಸರ, ಪಿ.ಎಂ ಪೋಷನ್ ಶಾಲಾ ಮಾಹಿತಿ ಮೊದಲಾದವುಗಳ ಗೋಡೆ ಬರಹ 25ಕ್ಕೂ ಹೆಚ್ಚು ಸುಂದರ ಚಿತ್ರ  ಕಲಾವಿದ ಅನಿಲ್ ಕಡಬ ಅವರ  ಕುಂಚದಿಂದ ಗೋಡೆಗಳ ಮೇಲೆ ಸೃಷ್ಟಿಯಾಗಿದೆ. 64 ವರ್ಷದ ಹಿಂದೆ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 129 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಗುರುಗಳ ಕೊಠಡಿ, ಎಂಟು ತರಗತಿ ಕೋಣೆಗಳು, ಒಂದು ಕಂಪ್ಯೂಟರ್, ಕ್ರೀಡಾ ಕೊಠಡಿಗಳಿಗೆ ಬಣ್ಣ ಬಳಿದು ಸುಂದರಗೊಳಿಸಲಾಗಿದೆ.

oppo_2

ವಾಟ್ಸಪ್ ಗ್ರೂಪ್ ರಚಿಸಿ ಧನ ಸಹಾಯ ಯಾಚನೆ

ಈ ಶಾಲೆಯ ಸೌಂದರ್ಯವನ್ನು ವೃದ್ಧಿಸುವ ಉದ್ದೇಶದಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಎರ್ಮಡ್ಕ ಹಾಗು ಶೇಖರ ಪಾಪುದಮಂಡೆ ಅಧ್ಯಕ್ಷತೆಯ  ಶಾಲಾಭಿವೃದ್ದಿ ಸಮಿತಿಯ ತಂಡದಿಂದ ‘ಶಾಲಾ ಸೌಂದರ್ಯಕರಣ’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ದಾನಿಗಳ ನೆರವು ಯಾಚಿಸಲಾಗಿತ್ತು. ಸುಮಾರು ೨ ಲಕ್ಷ ರೂ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ದಾನಿಗಳು, ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಹಾಗೂ ಶಾಲಾ ಶಿಕ್ಷಕರು ತನ್ನ ಕೈಯಲ್ಲಾದ ಧನ ಸಹಾಯ ನೀಡಿದ್ದಾರೆ.

ಸರ್ಕಾರಿ  ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಮಾಡುತ್ತಿರುವ ಈ ಕಾರ್ಯ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ ಎನ್ನುತ್ತಾರೆ ಶಾಲಾ ಮುಖ್ಯಗುರು ವಾರಿಜ ಬಿ ಅವರು.

ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ದಿ ಸಮಿತಿ  ಆಶಯದಂತೆ ಶಾಲಾ ಸೌಂದರ್ಯಕರಣದ ಯೋಜನೆ ರೂಪಿಸಿಕೊಂಡು ಕಾರ್ಯನುಷ್ಠಾನಕ್ಕಿಳಿದಾಗ  ಆರಂಭದಿಂದಲೇ ದಾನಿಗಳ ಒಳ್ಳೆಯ ಸಹಕಾರ ದೊರೆಯಿತು. ಶಾಲೆಗೆ ಸಂಪೂರ್ಣ ಬಣ್ಣ ಬಳಿದು ಗೋಡೆಗಳಲ್ಲಿ ವೈವಿಧ್ಯಮಯ ಚಿತ್ರಗಳಿಂದ  ಸಿಂಗರಿಸಿ ಹೊಸರೂಪ ನೀಡಬೇಕೆಂಬ ಗುರಿ ಸಾಧಿಸಲಾಗಿದೆ. ನಿರೀಕ್ಷೆಯಿಂದ ಹೆಚ್ಚಿನ ಹಣ ಸಂಗ್ರವಾಗಿದೆ. ಉಳಿಕೆ ಹಣದಲ್ಲಿ ಶಾಲಾ ಆವರಣ ಮುಂಬಾಗ ವಾಹನ ಪಾರ್ಕಿಂಗ್ ಮಾಡುವ ಸಲುವಾಗಿ ಸಮತಟ್ಟುಗೊಳಿಸಲಾಗುವುದು. ನೆರವು ನೀಡಿದ ಎಲ್ಲರಿಗೂ ಕೃತಜ್ಞತೆಗಳು- ಗಣೇಶ್ ಗೌಡ ಎರ್ಮಡ್ಕ, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ

 

ಶಾಲೆಯನ್ನು ಅಂದಗೊಳಿಸುವ ಉದ್ದೇಶದಿಂದ, ಶಿಕ್ಷಕರ ಪ್ರೋತ್ಸಾಹದಿಂದ, ದಾನಿಗಳ ನೆರವಿನಿಂದ ಶಾಲೆಗೆ ಬಣ್ಣ ಬಳಿಯಲಾಗಿದೆ. ಜೊತೆಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ಚಿತ್ರ, ಗೋಡೆ ಬರಹಗಳನ್ನು ಮಾಡಲಾಗಿದೆ. ನಿರೀಕ್ಷೆ ಮೀರಿ ಯೋಜನೆ ಕಾರ್ಯಗತವಾಗಿದೆ. ಶಾಲೆಯ ಅಭಿವೃದ್ದಿಯ ದೃಷ್ಟಿಯಿಂದ ಇನ್ನೂ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ- ಶೇಖರ ಗೌಡ ಪಾಪುದಮಂಡೆ, ಅಧ್ಯಕ್ಷರು, ಶಾಲಾಭಿವೃದ್ದಿ ಸಮಿತಿ

 

ವರದಿ- ಪ್ರವೀಣ್ ರಾಜ್ ಕೊಯಿಲ

 

error: Content is protected !!

Join the Group

Join WhatsApp Group