ಆಲಂಕಾರು: ಪಾರ್ಸೆಲ್ ನಲ್ಲಿ ಸ್ಮಾರ್ಟ್ ಫೋನ್ ಬದಲಿಗೆ ಸಿಹಿತಿಂಡಿ ಮತ್ತು ದೇವರ ಮೂರ್ತಿ ಕಳುಹಿಸಿ ವಂಚನೆ ► ಯುವತಿಯ ಮಾತಿಗೆ ಮರುಳಾಗಿ ಮೋಸ ಹೋದ ಕಾಲೇಜು ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಕಂಪೆನಿಯ ಪ್ರಚಾರಾರ್ಥವಾಗಿ ನಡೆದ ಅದೃಷ್ಟ ಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಬಹುಮಾನದ ರೂಪದಲ್ಲಿ ಸ್ಮಾರ್ಟ್ ಫೋನನ್ನು ಗೆದ್ದಿದೆ ಎಂದು ಗ್ರಾಹಕರನ್ನು ನಂಬಿಸಿ ಸಿಹಿತಿಂಡಿಯನ್ನು ಕಳುಹಿಸಿದ ಘಟನೆ ಆಲಂಕಾರಿನಲ್ಲಿ ಕಂಡುಬಂದಿದೆ.

ಪೆರಾಬೆ ಗ್ರಾಮದ ಮಾಪಲ ನಿವಾಸಿ ಕಾಲೇಜು ಯುವಕನ ಮೊಬೈಲ್ ಗೆ ಒಂದು ವಾರದ ಹಿಂದೆ ಕರೆಯೊಂದು ಬಂದಿದ್ದು, ಬೆಂಗಳೂರಿನ HHM ಮಾರ್ಕೆಟಿಂಗ್ ಕಂಪೆನಿಯ ಪ್ರಚಾರಾರ್ಥವಾಗಿ ನಮ್ಮ ಕಂಪೆನಿಯು ನಡೆಸಿದ ಅದೃಷ್ಟಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬಹುಮಾನವನ್ನು ಗೆದ್ದುಕೊಂಡಿದೆ. ಬಹುಮಾನವನ್ನು ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡುವುದರಿಂದ ಪಾರ್ಸೆಲ್ ವೆಚ್ಚವನ್ನು ನೀವು ವಿಪಿಪಿ ಮೂಲಕ ಭರಿಸಿ ಬಹುಮಾನ ಪಡೆದುಕೊಳ್ಳಿ ಎಂದು ಕಂಪೆನಿಯ ಕಡೆಯಿಂದ ಹುಡುಗಿಯೋರ್ವಳು ಅಂದದ ಸ್ವರದಲ್ಲಿ ಮಾತನಾಡಿ ವಿದ್ಯಾರ್ಥಿಯನ್ನು ಯಾಮಾರಿಸಿದ್ದಳು.

ಕಂಪೆನಿ ಸಿಬ್ಬಂದಿಯ ಮಾತು ನಂಬಿದ ಯುವಕ ಶುಕ್ರವಾರದಂದು ಕಾಲೇಜಿನಲ್ಲಿ ಸಮಾರಂಭ ಇದ್ದ ಕಾರಣ ಹರ್ಷದಿಂದ ಪಾರ್ಸೆಲ್ ಪಡೆದುಕೊಳ್ಳಲು ಅಂಚೆ ಕಚೇರಿಗೆ ಆಗಮಿಸಿದ ವಿದ್ಯಾರ್ಥಿ 1600 ರೂಪಾಯಿಯನ್ನು ಅಂಚೆ ಕಚೇರಿಯಲ್ಲಿ ಪಾವತಿಸಿ ಮುಗುಳು ನಗೆ ಬೀರುತ್ತಾ ಮೊಬೈಲ್ ಕನಸು ಕಾಣುತ್ತಾ ಪಾರ್ಸೆಲ್ ಬಿಚ್ಚಿದ್ದಾನೆ. ಆದರೆ ಪಾರ್ಸೆಲ್ ಬಿಚ್ಚಿದ ಯುವಕನಿಗೆ ಶಾಕ್ ಕಾದಿದ್ದು, ಮೊಬೈಲ್ ಫೋನ್ ಬದಲಿಗೆ ಒಂದು ಸೋನ್ ಪಪ್ಡಿ ಸಿಹಿತಿಂಡಿಯ ಪ್ಯಾಕ್, ಲಕ್ಷ್ಮೀಯ ಮೂರ್ತಿ, ಒಂದು ಕೂರ್ಮನ ಮೂರ್ತಿ, ಆರತಿ ತಟ್ಟೆ, ಗಣಪತಿಯ ಮೂರ್ತಿಯ ದರ್ಶನವಾಗಿದೆ. ಸ್ಮಾರ್ಟ್ ಫೋನ್ ಹಿಡಿಯುವ ತವಕದಲ್ಲಿದ್ದ ಯುವಕನಿಗೆ ಪಾರ್ಸೆಲ್ ಬಾಕ್ಸ್ ತೆರೆದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಕೊನೆಗೆ ಸೋನ್ ಪಪ್ಡಿಯ ಪ್ಯಾಕ್ ನಲ್ಲಿದ್ದ ಹುಡಿಹುಡಿಯಾದ ಸೋನ್ ಪಪ್ಡಿಯನ್ನು ತಿಂದು ಸಮಾಧಾನ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

error: Content is protected !!

Join the Group

Join WhatsApp Group