ಮೈಸೂರು ದಸರಾ- ಅರಮನೆಯತ್ತ ದಾಪುಗಾಲಿಟ್ಟ ಗಜಪಡೆ

(ನ್ಯೂಸ್ ಕಡಬ) newskadaba.com ಹುಣಸೂರು, ಆ. 21. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ಮುನ್ನುಡಿ ಬರೆಯುವ ಗಜಪಡೆಗೆ ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಮಹದೇವಪ್ಪ ಅವರು ಪೂಜೆ ಸಲ್ಲಿಸಿ, ಕಾಡಿನಿಂದ ಬೀಳ್ಕೊಟ್ಟಿದ್ದಾರೆ.

ಗಜಪಡೆಯಲ್ಲಿ ಕ್ಯಾಪ್ಟನ್ ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ಲಕ್ಷ್ಮಿ, ಕಂಜನ್, ರೋಹಿತ್ ಹಾಗೂ ಏಕಲವ್ಯ ಆನೆಗಳು ಇಂದು ಸಾಂಸ್ಕೃತಿಕ ನಗರಿಯತ್ತ ತೆರಳಿದ್ದು, ವಿವಿಧ ಜನಪದ ಕಲಾತಂಡಗಳು, ಗಿರಿಜನರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಡಿ ಮಕ್ಕಳ ನೃತ್ಯ ವೈಭವದೊಂದಿಗೆ ಬೀಳ್ಕೊಡಲಾಯಿತು.

ಇಂದು ಸಂಜೆಯ ವೇಳೆಗೆ ಮೈಸೂರು ನಗರಕ್ಕೆ ಆನೆಗಳು ಬರಲಿದ್ದು, ಅಶೋಕಪುರಂನ ಅರಣ್ಯ ಭವನ ಆವರಣದ ಕಿರು ಅರಣ್ಯದಲ್ಲಿ ಉಳಿದುಕೊಂಡು ಆ. 23 ರಂದು ಬೆಳಿಗ್ಗೆ ಅರಮನೆ ಆವರಣ ಪ್ರವೇಶಿಸುವ ಸಾಧ್ಯತೆಯಿದೆ. ಮೊದಲ ತಂಡದಲ್ಲಿ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಒಂಭತ್ತು ಆನೆಗಳು ತೆರಳಿದ್ದು, ಎರಡನೇ ಹಂತದಲ್ಲಿ ಐದು ಆನೆಗಳು ಹೆಚ್ಚುವರಿಯಾಗಿ ನಾಲ್ಕು ಆನೆಗಳು ತೆರಳಲಿವೆ.

Also Read  ತಮಿಳುನಾಡಿನ 4 ಜಿಲ್ಲೆ ಸಂಪೂರ್ಣ ಲಾಕ್ ಡೌನ್

ದಸರಾಕ್ಕೆ ತೆರಳಲಿರುವ 18 ಆನೆಗಳು, ಮಾವುತರು, ಕಾವಾಡಿ, ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ 2.33 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಕಾವಾಡಿಗರ ಕುಟುಂಬ ಉಳಿದುಕೊಳ್ಳಲು ಅರಮನೆ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

error: Content is protected !!
Scroll to Top