(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.28. ಕೋರೆ ಮಾಲಿಕನೋರ್ವನ ಮೇಲೆ ರೌಡಿ ಬ್ಲೇಡ್ ಸಾದಿಕ್ ಹಾಗೂ ತಂಡ ದಾಳಿ ನಡೆಸಿದ ಘಟನೆ ಪುತ್ತೂರು ಠಾಣಾ ವ್ಯಾಪ್ತಿಯ ಕಬಕದಲ್ಲಿ ಬುಧವಾರ ಸಂಜೆ ನಡೆದಿದೆ.
ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ಕಾರಿನಲ್ಲಿ ಬಂದ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬ್ಲೇಡ್ ಸಾದಿಕ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಆತನ ಐವರು ಸಹಚರರು ಐ20 ಕಾರಿನಲ್ಲಿ ಮಾಣಿ ಕಡೆ ಪರಾರಿಯಾಗಿದ್ದಾರೆ. ಗಾಯಾಳು ಖಾದರ್ ನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಯತ್ನ, ಹಲ್ಲೆ, ಅಪಹರಣ, ಸೇರಿದಂತೆ ಕರ್ನಾಟಕ ಮತ್ತು ಕೇರಳದಲ್ಲಿ ಸಾದಿಕ್ ವಿರುದ್ಧ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಪ್ರಥಮವಾಗಿ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ. ಠಾಣೆಯಲ್ಲಿ ಪೊಲೀಸರ ಮೇಲೆಯೂ ಈ ಹಿಂದೆ ಹಲ್ಲೆ ನಡೆಸಿದ ಕುಖ್ಯಾತಿಯನ್ನು ಹೊಂದಿರುವ ಬ್ಲೇಡ್ ಸಾದಿಕ್ ನನ್ನು ಆಗಿನ ಎಸೈ ಪ್ರಕಾಶ್ ದೇವಾಡಿಗರು ಈತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಬಂಧಿಸಿದ್ದರು. ಆದರೆ ಹೈಕೋರ್ಟ್ ನಿಂದ ಜಾಮೀನು ಪಡೆದು ಒಂದು ತಿಂಗಳಲ್ಲೇ ಹೊರಬಂದಿದ್ದ ಸಾದಿಕ್ ಮತ್ತೆ ವ್ಯಕ್ತಿಯೋರ್ವರ ಕೊಲೆಗೆ ಯತ್ನಿಸಿದ್ದ. ಇವತ್ತು ಮತ್ತೆ ಕಬಕದಲ್ಲಿ ಕೋರೆ ಮಾಲಿಕನ ಮೇಲೆ ತನ್ನ ಐವರು ಸಹಚರರೊಂದಿಗೆ ದಾಳಿ ನಡೆಸಿದ್ದಾನೆ. ಈತನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.









