ಸುಳ್ಯ: ಚೂರಿಯಿಂದ ಇರಿದು ಕಾಲೇಜು ವಿದ್ಯಾರ್ಥಿನಿಯ ಕೊಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.20. ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ತನ್ನ ಸಹಪಾಠಿಯೋರ್ವ ಚೂರಿಯಿಂದ ಇರಿದು ಕೊಲೆಗೈದ ದಾರುಣ ಘಟನೆ ಸುಳ್ಯದಲ್ಲಿ ಮಂಗಳವಾರದಂದು ಸಂಜೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರ ನಿವಾಸಿ, ಸುಳ್ಯ ಎನ್‌ಎಂಸಿ ಕಾಲೇಜಿನ ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿನಿ ಅಕ್ಷತಾ ಎಂದು ಗುರುತಿಸಲಾಗಿದೆ. ಕೊಲೆಗೈದಾತನನ್ನು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ, ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಾರ್ತಿಕ್ ಕೊಲೆ ಎಂದು ಗುರುತಿಸಲಾಗಿದ್ದು, ಅಕ್ಷತಾ ಎಂದಿನಂತೆ ಇಂದು ಸಂಜೆ ಕಾಲೇಜಿನಿಂದ ಹೊರ ಬರುತ್ತಿದ್ದ ವೇಳೆ ರೋಟರಿ ಶಾಲೆಯ ಬಳಿ ಆರೋಪಿ ಕಾರ್ತಿಕ್ ಅಕ್ಷತಾಳಿಗೆ ಏಳು ಬಾರಿ ಚೂರಿಯಿಂದ ಇರಿದು ನಂತರ ತಾನು ಕೂಡಾ ಕೈಯನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಅಕ್ಷತಾರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಪ್ರೇಮ ಪ್ರಕರಣದಿಂದಾಗಿ ಚೂರಿ ಇರಿದಿದ್ದು, ಆತ್ಮಹತ್ಯೆಗೆ ಯತ್ನಿಸಿರುವ ಕಾರ್ತಿಕ್‌ನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸುಳ್ಯ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!
Scroll to Top