ಕಡಬ: ಭಾರೀ ಗಾಳಿಗೆ ಶಾಲೆಯ ಎಲ್ಲಾ ಕೊಠಡಿಗಳ ಹಂಚುಗಳಿಗೆ ಹಾನಿ – ತರಗತಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ತಪ್ಪಿದ ಪ್ರಾಣಾಪಾಯ

(ನ್ಯೂಸ್ ಕಡಬ) newskadaba.com ಕಡಬ, ಜು.14.‌ ಕಳೆದ ಕೆಲವು ದಿನಗಳಿಂದ‌ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾನುವಾರ ಮಧ್ಯಾಹ್ನದಂದು ಬೀಸಿದ ಭಾರೀ ಗಾಳಿಗೆ ಕಡಬ ತಾಲೂಕಿನ ಬಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಕೊಠಡಿಗಳ ಹಂಚು ಹಾರಿ ಹೋಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.

ಹಂಚು ಹಾರುವ ಸಮಯ ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಶಾಲೆಯಲ್ಲಿ ಮಕ್ಕಳು ಇಲ್ಲದಿದ್ದುದರಿಂದ ಅನಾಹುತ ತಪ್ಪಿದೆ. ಎಂದಿನಂತೆ ತರಗತಿ ನಡೆಯುವ ವೇಳೆ ಈ ಘಟನೆ ನಡೆದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು. ನಾಳೆಯಿಂದ ತರಗತಿಗಳು ನಡೆಯಬೇಕಾದರೆ ಎಲ್ಲಾ ಕೊಠಡಿಗಳನ್ನು ಸರಿಪಡಿಸುವ ಅನಿವಾರ್ಯತೆ ಎದುರಾಗಿದೆ. ಸ್ಥಳಕ್ಕೆ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಕೆ, ಪಂಚಾಯತ್ ಸದಸ್ಯರಾದ ಮೀನಾಕ್ಷಿ ನೆಲ್ಲ, SDMC ಸದಸ್ಯರಾದ ಗಣೇಶ್ ಭಟ್ ದೇವರಡ್ಕ, SDMC ಮಾಜಿ ಅಧ್ಯಕ್ಷರಾದ ಪಿ.ಟಿ. ಜೋಸೆಫ್, ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಎನ್. ಕೊಲ್ಲಿಮಾರು ಬಲ್ಯ ಮತ್ತಿತರರು ಭೇಟಿ ನೀಡಿ ವೀಕ್ಷಿಸಿದರು.

error: Content is protected !!
Scroll to Top