ಮರೆಯಲಾಗದ ನೆನಪು – ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಹದಿನಾಲ್ಕು ವರ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಇಲ್ಲಿನ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದು ಇಂದಿಗೆ ಹದಿನಾಲ್ಕು ವರ್ಷ ಸಂದಿದೆ.

ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. 2010 ರ ಮೇ 22 ರಂದು ಮುಂಜಾನೆ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಇಳಿದ ಏರ್ ಇಂಡಿಯಾ ವಿಮಾನ 6:14 ರ ಸಮಯದಲ್ಲಿ ಪೈಲಟ್ ನ ಸಣ್ಣ ತಪ್ಪಿನಿಂದಾಗಿ ಕೆಂಜಾರು ಗುಡ್ಡೆಯಲ್ಲಿ ನೋಡ ನೋಡುತ್ತಿದ್ದಂತೆಯೇ ಭೀಕರ ದುರಂತಕ್ಕೀಡಾಗಿತ್ತು. ದುಬೈಯಿಂದ ಹಲವು ಕನಸುಗಳನ್ನು ಹೊತ್ತು ತವರಿಗೆ ಮರಳುತ್ತಿದ್ದ ಹಲವರ ಕನಸುಗಳು ನುಚ್ಚು ನೂರಾಗಿದ್ದವು. ಪ್ರತೀ ವರ್ಷ ಹಳೆಯ ದುರಂತ ನೆನಪಾಗುತ್ತದೆಯೇ ಹೊರತು ಮೃತರಿಗೆ ಸಿಗಬೇಕಾದ ಪರಿಹಾರ ಮೊತ್ತ ಸಮರ್ಪಕವಾಗಿ ವಿಲೇವಾರಿಯಾಗಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ. ಮೃತರ ಹಲವು ಕುಟುಂಬಗಳು ಇಂದಿಗೂ ಕಷ್ಟಕರ ಜೀವನವನ್ನು ಸಾಗಿಸುತ್ತಿವೆ.

ವಿಮಾನವು ನಿಯಂತ್ರಣದಲ್ಲಿಲ್ಲ ಎಂದು ಸಹ ಪೈಲಟ್ ನೀಡಿದ ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಮುಖ್ಯ ಪೈಲಟ್ ಅತಿ ವೇಗದಿಂದ ಸಾಗುತ್ತಿದ್ದ ವಿಮಾನವನ್ನು ಮತ್ತೆ ಮೇಲಕ್ಕೆತ್ತುವ ನಿರ್ಧಾರಕ್ಕೆ ಬಂದಿದ್ದೇ ದುರಂತಕ್ಕೆ ಪ್ರಮುಖ ಕಾರಣವಾಗಿತ್ತು. ಭೀಕರ ದುರಂತದ‌ ನಂತರವೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳ‌ ಬೇಜವಾಬ್ದಾರಿಯಿಂದ ಹಲವು ದುರಂತಗಳು ಕೆಲವೇ ಕ್ಷಣಗಳ ಅಂತರದಲ್ಲಿ ತಪ್ಪಿ ಹೋಗಿವೆ.

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

error: Content is protected !!
Scroll to Top