ಹೃದಯಾಘಾತದಿಂದ ಪತ್ನಿ ಮೃತ್ಯು- ನೊಂದ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಉಳ್ಳಾಲ, ಮಾ. 01. ಹೃದಯಾಘಾತದಿಂದಾಗಿ ಪತ್ನಿ ಮೃತಪಟ್ಟ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ನಡೆದಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಮಹಿಳೆ ಗ್ರಾಮಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಹಾಗೂ ಪತಿ ಶೇಷಪ್ಪ ಪೂಜಾರಿ(63) ಎದು ಗುರುತಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೀನಾಕ್ಷಿಯವರು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರದಂದು ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪತ್ನಿಯ ಅನಾರೋಗ್ಯದಿಂದ ಚಿಂತಿತರಾಗಿ ಮನೆಯಲ್ಲಿದ್ದ ಶೇಷಪ್ಪ ಪೂಜಾರಿ ಅವರಿಗೆ, ಬುಧವಾರದಂದು ಸಂಜೆ ಮೀನಾಕ್ಷಿ ಅವರ ಸಾವಿನ ಸುದ್ಧಿಯನ್ನು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಇದರಿಂದ ನೊಂದ ಶೇಷಪ್ಪ ಪೂಜಾರಿ ಅವರು ಕೀಟನಾಶಕವನ್ನು ಕುಡಿದಿದ್ದು, ತಕ್ಷಣವೇ ಸಂಬಂಧಿಕರು ಸೇರಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top