16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ಮಾದಕ ದ್ರವ್ಯ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರ ತಂಡ ಕೇರಳದಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ.

 

ಬಂಧಿತ ಆರೋಪಿಯನ್ನು ಟಿ.ಇ.ಜೋಸೆಫ್ ಎಂದು ಗುರುತಿಸಲಾಗಿದೆ. ಈತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನು 16 ವರ್ಷಗಳಿಂದ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು, ಈತನ ವಿರುದ್ದ ನ್ಯಾಯಾಲಯವು ದಸ್ತಗಿರಿ ವಾರೆಂಟನ್ನು ಹೊರಡಿಸಿತ್ತು. ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ಅನಂತ ಪದ್ಮನಾಭ ಇವರ ಮಾರ್ಗದರ್ಶನದಲ್ಲಿ ಎ.ಎಸ್.ಐ ಆಶೋಕ್ ಹೆಚ್.ಸಿ, ವಿಜಯ ಸುವರ್ಣ, ಹೆಚ್.ಸಿ ಲೋಕೇಶ್ ಹಾಗೂ ಇತರ ಸಿಬ್ಬಂದಿಗಳ ತಂಡ ರಚಿಸಿ, ಆರೋಪಿ ಟಿ.ಇ. ಜೋಸೆಫ್, ಕೇರಳದ ತ್ರಿಶೂರ್ ಜಿಲ್ಲ್ಲೆಯ ಪುತ್ತುಕ್ಕಾಡ್ ಗ್ರಾಮದಲ್ಲಿರುವ ಬಗ್ಗೆ ವಿವಿಧ ಅಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಯ ಇರುವಿಕೆಯನ್ನು ಖಚಿತಪಡಿಸಿಕೊಂಡು, ಫೆಬ್ರವರಿ 22 ರಂದು ತ್ರಿಶೂರ್ ಜಿಲ್ಲ್ಲೆಯಲ್ಲಿ ವಶಕ್ಕೆ ಪಡೆದು ಮಂಗಳೂರಿನ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು, ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿರುವುದಾಗಿ ಕರಾವಳಿ ಕಾವಲು ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top