ಅರಂತೋಡು: ಶಾಲಾ ಬಸ್ ಢಿಕ್ಕಿ ಹೊಡೆದು 6 ವರ್ಷದ ಬಾಲಕಿ ಮೃತ್ಯು ► ಬಸ್ಸಿನಿಂದ ಇಳಿದು ಟಿಫಿನ್ ಪಡೆಯುತ್ತಿದ್ದಾಗ ಘಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.13. ಶಾಲಾ ಬಸ್ಸೊಂದು ಢಿಕ್ಕಿ ಹೊಡೆದು ಆರು ವರ್ಷ ವಯಸ್ಸಿನ ಬಾಲಕಿ ಮೃತಪಟ್ಟ ಘಟನೆ ಸುಳ್ಯ ಸಮೀಪದ ಅರಂತೋಡಿನಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತ ಬಾಲಕಿಯನ್ನು ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಅಪ್ಪಕುಂಜಿ ಎಂಬವರ ಪುತ್ರಿ, ಕೆವಿಜಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಆಗ್ನೇಯ ಬಾಲು(6) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಸ್ಕೂಲ್ ಬಸ್ಸಿನಿಂದ ಇಳಿದಿದ್ದು ಆ ಸಮಯ ಆಕೆಯ ಟಿಫಿನ್ ಬಾಕ್ಸ್ ಬಸ್ಸಿನಲ್ಲಿ ಉಳಿದಿದ್ದರಿಂದ ಅದನ್ನ ಉಳಿದ ವಿದ್ಯಾರ್ಥಿಗಳು ಬಸ್ಸಿನಿಂದ ಬಾಲಕಿಗೆ ಕೊಡುತ್ತಿದ್ದಾಗ ಬಸ್ಸಿನ ಚಾಲಕ ಧನಂಜಯ ಎಂಬಾತ ಸ್ಕೂಲ್ ಬಸ್ಸಿನ ಹತ್ತಿರ ನಿಂತು ಟಿಫಿನ್ ಬಾಕ್ಸ್ ಪಡೆಯುತ್ತಿದ್ದ ಬಾಲಕಿಯನ್ನು ಗಮನಿಸದೇ ಶಾಲಾ ಬಸ್ಸನ್ನು ಏಕಾಏಕಿ ಚಲಾಯಿಸಿದ ಪರಿಣಾಮ ಬಸ್ಸು ಬಾಲಕಿಗೆ ತಾಗಿ ಬಾಲಕಿ ಎಸೆಯಲ್ಪಟ್ಟಿದ್ದಾಳೆ‌. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಅಹಮ್ಮದ್ ಅನ್ಸೀಪ್(10) ಎಂಬಾತ ನೀಡಿದ ದೂರಿನ ಮೇರೆಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಂಟ್ವಾಳ ;ಆರ್.ಟಿ.ಸಿ. ತಿದ್ದುಪಡಿಗೆ ಲಂಚಕ್ಕೆ ಬೇಡಿಕೆ ➤ ಉಪತಹಸೀಲ್ದಾರ್ ಎಸಿಬಿ ಬಲೆಗೆ

error: Content is protected !!
Scroll to Top