ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ತರಬೇತಿ ಶಿಬಿರ; ಹೃದಯ ಪುನಶ್ಚೇತನ ಕೌಶಲ್ಯ ಅತ್ಯಗತ್ಯ- ಡಾ|| ಕಿಶನ್ ರಾವ್ ಬಾಳಿಲ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ಶಿಬಿರವು ದ.ಕ ಜಿಲ್ಲಾ ಗೃಹರಕ್ಷಕ ದಳ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮೇರಿಹಿಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಶೀನ ಪೂಜಾರಿ, ಲಯನ್ಸ್ ಕ್ಲಬ್ ಮಂಗಳೂರು ಮತ್ತು  ಡಾ|| ಮಹಾಲಿಂಗ ಶರ್ಮ ಸಂಪತ್ತಿಲ, ಹಿರಿಯ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ  ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ,  ಜನರ ಜೀವ ಉಳಿಸಲು ಗೃಹರಕ್ಷಕರನ್ನು ತರಬೇತಿಗೊಳಿಸಿ ಅವರನ್ನು ಜೀವರಕ್ಷಕರನ್ನಾಗಿ ತಯಾರಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ. ಅಪಘಾತ ಅಥವಾ  ಇನ್ಯಾವುದೇ ಅವಘಡಗಳಾದಾಗ ತಕ್ಷಣವೇ ಸ್ಪಂದಿಸಲು ಈ ತರಬೇತಿ ಗೃಹರಕ್ಷಕರಿಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯರಾದ ಜನರಲ್ ಸರ್ಜನ್  ಡಾ|| ಕಿಶನ್ ರಾವ್ ಬಾಳಿಲ ಇವರು ಶಿಬಿರವನ್ನು ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು ಹೃದಯ  ಪುನಶ್ಚೇತನ ಕೌಶಲ್ಯ ತರಬೇತಿ ಎಲ್ಲರಿಗೂ ದೊರಕಬೇಕು. ಸಾಮಾನ್ಯ ಮನುಷ್ಯರೂ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಗೃಹರಕ್ಷಕರಿಗೆ ನೀಡುವ ತರಬೇತಿ ಸ್ವಾಗತಾರ್ಹ ಎಂದು ನುಡಿದರು.

ಈ ಸಂದರ್ಭದಲ್ಲಿ  ಲಯನ್ಸ್ ಕ್ಲಬ್ ಮಂಗಳೂರು ಇದರ ಜೊತೆ ಕಾರ್ಯದರ್ಶಿಯಾದ ಶ್ರೀ ದಿನಕರ್ ಕೋಟ್ಯಾನ್ ಮತ್ತು ಜೊತೆ ಕೋಶಾಧಿಕಾರಿ ಶ್ರೀ ನಾರಾಯಣ ಕೋಟ್ಯಾನ್ ಉಪಸ್ಥಿತರಿದ್ದರು. ಗೃಹರಕ್ಷಕ, ಗೃಹರಕ್ಷಕಿಯರು ಈ ಶಿಬಿರದಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು.

error: Content is protected !!

Join the Group

Join WhatsApp Group