ಕುಂತೂರು ಮಾರ್ ಇವಾನಿಯೋಸ್ ಬಿ ಎಡ್ ಕಾಲೇಜು ವಾರ್ಷಿಕೋತ್ಸವ – ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸೋಣ- ಹರಿಶ್ಚಂದ್ರ ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 07. ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆ ಅತ್ಯಂತ ಮೌಲ್ಯಯುತವಾದದ್ದು ಪ್ರಸ್ತುತ ಸಮಾಜದ ಬದಲಾದ ಕಾಲಘಟ್ಟದ‌ ಪರಿಸ್ಥಿತಿಯಲ್ಲಿ ಪಾಶ್ಚಾತ್ಯ ಶೈಲಿಯ ಆಕರ್ಷಣೆಗಳಿಗೆ ಒಳಗಾಗದೆ ಶಿಕ್ಷಣವನ್ನು ಪಡೆಯಲು ಉತ್ತಮ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ನಿರ್ಮಿಸಿ ಕೊಡಬೇಕು. ಇವುಗಳ ಜೊತೆಗೆ ಮಕ್ಕಳನ್ನು ತಿದ್ದಿ-ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಹೊಂದಿರುವ ಶಿಕ್ಷಕರು ಉತ್ತಮ ಗುಣ-ನಡತೆಗಳೊಂದಿಗೆ ಸಚ್ಚಾರಿತ್ರ‍್ಯವನ್ನು ಹೊಂದಿ ಶಿಕ್ಷಣ ವೃತ್ತಿಯ ಘನತೆ-ಗೌರವವನ್ನು ಸದಾ ಕಾಲವೂ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಜ್ಞೆಯನ್ನು ಹೊಂದಿರುವುದು ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸೈಂಟ್ ಜಾರ್ಜ್ ಅನುದಾನಿತ ಪ್ರೌಢಶಾಲೆ, ಕುಂತೂರು ಪದವು ಇಲ್ಲಿನ ಮುಖ್ಯೋಪಾಧ್ಯಾಯ ಶ್ರೀಯುತ ಹರಿಶ್ಚಂದ್ರ ಕೆ ಅವರು ಹೇಳಿದರು. ಅವರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಕುಂತೂರು, ಇದರ ವಾರ್ಷಿಕೋತ್ಸವ ಕಾರ‍್ಯಕ್ರಮವನ್ನು ಉದ್ಘಾಟಿಸಿ, ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಲಿಯುತ್ತಾ ಬೆಳೆಯುವ ಹಂತದಲ್ಲಿ ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡುವುದು ಸಹಜ. ಆದರೆ ತಪ್ಪುಗಳನ್ನು ತಿದ್ದಬೇಕಾದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಶಿಕ್ಷಕ ವೃತ್ತಿಯ ಪಾವಿತ್ರ‍್ಯವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರದ್ದಾಗಿರುತ್ತದೆ ಎಂದು ಹೇಳಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವ್ಯವಸ್ಥಾಪಕ ರೇ|ಫಾ|ಡಾ|ಎಲ್ದೋ ಪುತ್ತನ್ ಕಂಡತ್ತಿಲ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

Also Read  3 ತಿಂಗಳ ಸಂಬಳ ಸಿಗದೆ ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

ಕಾಲೇಜಿನ ಶೈಕ್ಷಣಿಕ ವರ್ಷದ ಸಮಗ್ರ ವರದಿಯನ್ನು ಶೈಕ್ಷಣಿಕ ಸಲಹೆಗಾರರಾದ ಉಪನ್ಯಾಸಕಿ ಶ್ರೀಮತಿ ವಿನ್ಸಿ ಅಬ್ರಹಾಂ ವಾಚಿಸಿದರು. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಯುತ ಹರಿಶ್ಚಂದ್ರ ಕೆ. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ವಿವಿಧ ಪಠ್ಯಕ್ರಮ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಗರಿಷ್ಠ ಅಂಕಗಳೊಂದಿಗೆ ಸಾಧನೆಗೈದ ವಿದ್ಯಾರ್ಥಿ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕಾಲೇಜಿನ ಪ್ರಶಿಕ್ಷಣಾರ್ಥಿಗಳ ಸೃಜನಶೀಲ ಬರವಣಿಗೆಗಳ ಸಂಗ್ರಹವಾದ ಕಾಲೇಜಿನ ವಾರ್ಷಿಕ ಸಂಚಿಕೆ ಸ್ಪೌçಟಿಂಗ್ ಸ್ಪ್ರಿಂಗ್ಅನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್. ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ರಶ್ಮಿ ಪಿ.ಕೆ. ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ಕುಮಾರಿ ದೀಕ್ಷಾ ಮಾಥ್ಯೂ ಮತ್ತು ಕುಮಾರಿ ಮೇಘಶ್ರೀ ಪಿ ಕಾರ‍್ಯಕ್ರಮವನ್ನು ನಿರೂಪಿಸಿದರು.

Also Read  ಎಸ್ಸೆಸ್ಸೆಫ್ ಬೈತಡ್ಕ: ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ

error: Content is protected !!
Scroll to Top