ಚಾರ್ಮಾಡಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದ ಬೊಲೇರೋ ► ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಕಾರೊಂದು ರಸ್ತೆ ಬದಿಯ 60 ಅಡಿಯ ಕಮರಿಗೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಘಟನೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಕಾರ್ಟಗಿ ನಿವಾಸಿಗಳಾದ ಬೊಲೆರೋ ಚಾಲಕ ಶ್ರೀಧರ್(38), ಶರಣಪ್ಪ(34), ತೇಜಶ್ವಿನಿ(9) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ 60 ಅಡಿ ಪ್ರಪಾತಕ್ಕೆ ಬಿದ್ದು ಜಖಂಗೊಂಡಿದೆ. ಈ ಸಂದರ್ಭದಲ್ಲಿ ಅದೇ ದಾರಿಯಿಂದಾಗಿ ಬರುತ್ತಿದ್ದ ಮುಂಡಾಜೆಯ ಗ್ರಾಪಂ ಸದಸ್ಯರಾದ ಅಬ್ದುಲ್ ಅಝೀಝ್ ಹಾಗೂ ಸ್ನೇಹಿತರು ಗಮನಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ಬೊಲೆರೊದೊಳಗೆ ಸಿಲುಕಿದ್ದವರನ್ನು ಹಗ್ಗದ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Scroll to Top