ಆದ್ಯಪಾಡಿ ಮಹಿಳಾ ಸಿಬ್ಬಂದಿಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ► ಬೈಕಿಗೆ ಢಿಕ್ಕಿ ಹೊಡೆದಿರುವುದನ್ನು ವಿಚಾರಿಸಿದ್ದಕ್ಕೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆಂದು ಮರು ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.11. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಮಹತ್ವದ ತಿರುವು ದೊರೆತಿದ್ದು, ಪರಸ್ಪರ ವಿರುದ್ದ ದೂರುಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಲೈಂಗಿಕ ಕಿರುಕುಳ ಆರೋಪ ಮಾಡಿದ ಯುವತಿ ಹಾಗೂ ಆಕೆಯ ಜೊತೆಯಲ್ಲಿದ್ದ ಯುವಕನ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ರಕ್ಷಿತ್ ಎಂಬುವರು ಶನಿವಾರದಂದು ಬಜ್ಪೆ ಠಾಣೆಗೆ ಮರು ದೂರು ನೀಡಿದ್ದಾರೆ. ವಿಮಾನ‌ ನಿಲ್ದಾಣದ ಮಹಿಳಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿ ಶುಕ್ರವಾರ ರಾತ್ರಿ ತನ್ನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ತೆರಳುವಾಗ ತಡವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ‌ ಮನೆಯತ್ತ ತೆರಳಿದ್ದಾರೆ. ಕಾರಿನಲ್ಲಿಬ್ಬರು ತೆರಳಿರುವುದನ್ನು ಗಮನಿಸಿದ ಶೇಕರ್, ಅಭಿಷೇಕ್, ನಿಖಿಲ್ ಹಾಗೂ ರಕ್ಷಿತ್ ಸೇರಿದಂತೆ ಯುವಕರ ತಂಡವೊಂದು ಹಿಂಬಾಲಿಸಿಕೊಂಡು ಆದ್ಯಪಾಡಿ ಬಳಿ ಕಾರು ಅಡ್ಡಗಟ್ಟಿ ಯುವಕರ ತಂಡ ಹಿಂದೂ ಸಂಘಟನೆಯ ಹೆಸರು ಹೇಳಿಕೊಂಡು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದೆ ಹಾಗೂ ಲೈಂಗಿಕ ಕಿರುಕುಳವನ್ನು ನೀಡಿ ತಮ್ಮ ಮೇಲೆ ಹಲ್ಲೆ ನಡೆಸಿ ತನ್ನಲ್ಲಿದ್ದ ಚಿನ್ನದ ಸರ, ಎಟಿಎಮ್ ಕಾರ್ಡ್ ಕಿತ್ತು ಕಾರಿಗೆ ಕಲ್ಲು ತೂರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು.

ಆದರೆ ಈ ನಡುವೆ ಈ ಪ್ರಕರಣಕ್ಕೆ ತಿರುವು ದೊರೆತಿದ್ದು, ಯುವತಿ ಹಾಗೂ ಕಾರಿನಲ್ಲಿದ್ದ ಯುವಕನ ವಿರುದ್ಧ ರಕ್ಷಿತ್ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಕೆಲಸ ಮುಗಿಸಿ ತಡರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದ ಅದ್ಯಪಾಡಿ ನಿರ್ಜನ ಪ್ರದೇಶದಲ್ಲಿ ಏಕಾಏಕಿ ಅತೀ ವೇಗದಿಂದ ಬಂದ ಕಾರು ಬೈಕ್ ಒಂದಕ್ಕೆ ಢಿಕ್ಕಿ ಹೊಡೆದು ಮುಂದೆ ಸಾಗಿದ್ದು, ಈ ಪರಿಣಾಮ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಗುದ್ದಿ ಓಡಿದ ಬಗ್ಗೆ ಕಾರಿನಲ್ಲಿದ್ದವರನ್ನು ವಿಚಾರಿಸಿದ್ದೇವೆ. ಬೈಕಿಗೆ ಹಾನಿಯಾಗಿದ್ದಕ್ಕೆ ದುರಸ್ಥಿಗೆಂದು ಹಣ ಕೇಳಿದ ಹಿನ್ನಲೆಯಲ್ಲಿ ಕಾರಿನಲ್ಲಿದ್ದ ಯುವತಿ ತನ್ನಲ್ಲಿದ್ದ ಎಟಿಎಂ ಕಾರ್ಡ್ ನೀಡಿ 1500 ರೂಪಾಯಿ ತೆಗೆದುಕೊಳ್ಳುವಂತೆ ತಿಳಿಸಿದ್ದಾಳೆ. ಅದರಂತೆ ಎಟಿಎಂಗೆ ತೆರಳಿ ಹಣವನ್ನು ಡ್ರಾ ಮಾಡಿ ಬರುವಾಗ ಕಾರಿನಲ್ಲಿದ್ದ ಯುವಕನ ಸ್ನೇಹಿತರು ಬಂದು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ರಕ್ಷಿತ್ ದೂರು ನೀಡಿದ್ದಾರೆ.

error: Content is protected !!

Join the Group

Join WhatsApp Group