ದೈವಾರಾಧನೆಯ ನರ್ತನ ಪ್ರದರ್ಶನ ಮೆರವಣಿಗೆಗಳಲ್ಲಿ ಪ್ರದರ್ಶಿಸುವುದು ತರವಲ್ಲ – ಕಿಟ್ಟು ಕಲ್ಲುಗುಡ್ಡೆ

(ನ್ಯೂಸ್ ಕಡಬ) newskadaba.com ಕಡಬ, ಅ. 06. ನಮ್ಮ ಧಾರ್ಮಿಕ ಆಚರಣೆಯ ಮೆರವಣಿಗೆಗಳಲ್ಲಿ ದೈವಾರಾಧನೆಯ ನರ್ತನ ಪ್ರದರ್ಶನ ಮಾಡುವುದು ಸರಿಯಲ್ಲ. ಈ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ದೈವ ಆರಾಧನಾ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಹೇಳಿದರು.


ಅವರು ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೈವಗಳ ನರ್ತನ ದೈವದ ಕೊಠಡಿಯಡಿಯಲ್ಲೇ ನಡೆಯಬೇಕೇ ಹೊರತು ಹಾದಿಬೀದಿಯಲ್ಲಿ ನಡೆಯಬಾರದು. ಯಾಕೆಂದರೆ ಅದಕ್ಕೊಂದು ಕಟ್ಟುಕಟ್ಟಲೆ ನೀತಿ ನಿಯಮವಿದೆ. ಗಣೇಶೋತ್ಸವ, ಶಾರದೋತ್ಸವ, ನವರಾತ್ರಿ ಉತ್ಸವದಂತಹ ಮೆರವಣಿಗೆಗಳಲ್ಲಿ ದೈವಕ್ಕೆ ಕಟ್ಟುವ ಪ್ರದರ್ಶನ ಮಾಡುವುದರಿಂದ ದೈವಾರಾಧನೆ ಮಾಡುವ ಜನರ ಭಾವನೆಗೆ ಘಾಸಿಯಾಗುತ್ತದೆ. ದೈವರಾಧನೆ ಯಾವತ್ತು ಅಪಭ್ರಂಶ ಆಗಬಾರದು ಎಂದರು. ನಮ್ಮಲ್ಲಿ ದೈವಾರಾಧನೆಯ ಬಗ್ಗೆ ಕೆಲವರಿಗೆ ಸ್ಪಷ್ಟ ಅರಿವಿಲ್ಲ. ತುಳುನಾಡಿನಲ್ಲಿ ದೈವಾರಾಧನೆ ಮಾಡುವಾಗ ಅದಕ್ಕೆ 16 ಕಟ್ಟಲೆ ಎನ್ನುವ ನಿಯಮವಿದೆ, ದೈವಾರಾಧನೆ ಯಾವಾಗಲೂ ಮಾಡುವ ಪದ್ಧತಿಯಿಲ್ಲ. ಸಿಕ್ಕಸಿಕ್ಕವರು ದೈವ ನರ್ತನ ಮಾಡುವ ಕ್ರಮವಿಲ್ಲ, ಅದಕ್ಕೆ ಪರವ, ಪಂಬದ ಹಾಗೂ ನಲಿಕೆ ಜನಾಂಗದವರು ಮಾತ್ರ ದೈವಾರಾಧನೆಯ ನರ್ತನ ಸೇವೆಯನ್ನು ಮಾಡಬೇಕು. ಆದರೆ ಯಕ್ಷಗಾನ, ನಾಟಕಗಳಲ್ಲಿ ಪ್ರದರ್ಶನ ಮಾಡುವುದಿಲ್ವಾ ಎನ್ನುವ ಪ್ರಶ್ನೆ ಬರುತ್ತದೆ. ಯಕ್ಷಗಾನ ನಾಟಕಗಳಲ್ಲಿ ಒಂದು ದೈವವನ್ನು ಮಾಡಬೇಕಿದ್ದರೆ ಅವರು ಉಪಯೋಗಿಸುವ ವೇಷ ಭೂಷಣಗಳು ನಾವು ಸಾಂಪ್ರದಾಯಿಕವಾಗಿ ಕಟ್ಟುವ ವೇಷಭೂಷಣದಂತೆ ಇರುವುದಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಕೆಲವರಿಗೆ ಮನವರಿಕೆ ಇಲ್ಲ. ತುಳುನಾಡಿನಲ್ಲಿ ದೈವಾರಾಧನೆಗೆ ಅದರದ್ದೇ ಆದ ನಂಬಿಕೆ ನಡವಳಿಕೆಗಳಿವೆ. ಅದಕ್ಕೆ ಅಪಚಾರ ಮಾಡಲಾಗುತ್ತಿದೆ. ಇತ್ತೀಚೆಗೆ ಮೆರವಣಿಗೆಯೊಂದರಲ್ಲಿ ಗುಳಿಗ ವೇಷ ಹಾಕಿಕೊಂಡು ರಸ್ತೆಯಲ್ಲಿ ಹೊರಲಾಡುವುದು, ಆವೇಶ ಬಂದಂತೆ ನಟಿಸುವುದು ಕಂಡು ಬಂದಿದೆ. ಆವೇಶ ತನ್ನಷ್ಟಕ್ಕೆ ತಾನು ಬರುವುದಿಲ್ಲ. ಅದಕ್ಕೆ ಒಂದು ಕ್ರಮ ಇದೆ, ದೈವದ ಕೊಡಿಯಡಿಯಲ್ಲಿ ಎಲ್ಲರೂ ಅಕ್ಷತೆ ಹಿಡಿದು ಪ್ರಾರ್ಥನೆ ಮಾಡಿ ಅಭಯದ ನುಡಿ ಕೊಡಬೇಕು ಎಂದು ಪ್ರಾರ್ಥಿಸಿದ ಬಳಿಕವೇ ದೈವಕ್ಕೆ ಆವೇಶ ಬರುವುದು. ದೈವಕ್ಕೆ ಕಟ್ಟುವವರು ಭಕ್ತಿಶ್ರದ್ಧೆಯಿಂದ ನಿಯಮ ಪಾಲಿಸಬೇಕು. ತುಳುನಾಡಿನಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಮ್ ಕ್ರೈಸ್ತ ಜನಾಂಗದವರೂ ದೈವಾರಾಧನೆ ಮಾಡುತ್ತಾರೆ. ದೈವಾರಾಧನೆಯನ್ನು ಯಾರೂ ವಿರೋಧಿಸುವುದಿಲ್ಲ, ನಾವು ನಂಬಿಕೊಂಡು ಬಂದ ವ್ಯವಸ್ಥೆಗೆ ಅಪಹಾಸ್ಯ ಮಾಡಿದಂತಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ ಹಿನ್ನೆಯಲ್ಲಿ ಅವರು ಆ ರೀತಿಯ ಪ್ರದರ್ಶನ ಮಾಡಬಾರದು ಎನ್ನುವ ಆದೇಶ ನೀಡಿದ್ದರೂ, ಕೆಲವರು ಇನ್ನೂ ಅಪಹಾಸ್ಯ ಮಾಡುತ್ತಿದ್ದಾರೆ. ಅಪಹಾಸ್ಯ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆ ಇದೆ. ಹಾಗಾಗಿ ತುಳುನಾಡಿ ಈ ಶ್ರೇಷ್ಠ ಆಚರಣೆಯನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಬಾರದು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ನಿಕಟಪೂರ್ವಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನ ಸಮಿತಿಯ ಕಡಬ ತಾಲೂಕು ಉಪಾಧ್ಯಕ್ಷ ಅಣ್ಣು  ಪಣೆಮಜಲು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group