ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳ್ಳತನ – ಆರೋಪಿಗಳಿಬ್ಬರು ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 05. ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ಮಂಗಳೂರಿನಲ್ಲಿ ರೈಲು ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕಳ್ಳರಿಬ್ಬರನ್ನು ರೈಲ್ವೇ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

 

ಬಂಧಿತರನ್ನು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಭಯರಾಜ್‌ ಸಿಂಗ್ (26) ಹಾಗೂ ರಾಜ್ ಪುರದ ಹರಿಶಂಕರ್ (25) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸೆಪ್ಟೆಂಬರ್ 28ರಂದು ಮಂಗಳೂರು-ಸುರತ್ಕಲ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ರೈಲಿನಲ್ಲಿದ್ದ ಇಬ್ಬರು ಯುವಕರ ಬಗ್ಗೆ ಸಂಶಯಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಆರ್.ಪಿಎಫ್ ತಂಡ ರೈಲ್ವೇ ಪೊಲೀಸರ ವಶಕ್ಕೆ ನೀಡಿದ್ದಾರೆ.

ಆರೋಪಿಗಳು ಉತ್ತರಪ್ರದೇಶದಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ರಾತ್ರಿ ವೇಳೆ ಸಂಚರಿಸುವ ರೈಲನ್ನು ಟಾರ್ಗೆಟ್ ಮಾಡಿ, ರಾತ್ರಿ ರೈಲಿನಲ್ಲಿ ಮಲಗಿರುತ್ತಿದ್ದ ವೃದ್ಧ ಹಾಗೂ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚಲು ಸ್ಕೇಚ್‌ ಹಾಕುತ್ತಿದ್ದರು. ರಾತ್ರಿ ವೇಳೆ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದರು ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಆರೋಪಿಗಳು ಪಾಲಕ್ಕಾಡ್, ತಿರುವನಂತಪುರಂ ಹಾಗೂ ಮಂಗಳೂರು – ಮುಂಬೈ ನಡುವಿನ ಕೊಂಕಣ ರೈಲಿನಲ್ಲಿ ಹೆಚ್ಚು ಕಳವು ಮಾಡುತ್ತಿದ್ದರು. ತನಿಖೆಯ ವೇಳೆ ಆರೋಪಿಗಳಿಂದ ಪ್ರಯಾಣಿಕರಿಂದ ಕದ್ದು ಇರಿಸಿಕೊಂಡಿದ್ದ 125 ಗ್ರಾಂ ಚಿನ್ನಾಭರಣಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Also Read  ಶಾಲೆ ಕಡೆ ನನ್ನ ನಡೆ ವಿಶೇಷ ದಾಖಲಾತಿ ಆಂದೋಲನ ಹೊಸ ಯೋಜನೆ ಜಾರಿ

error: Content is protected !!
Scroll to Top