ಕಡಬ: ಶಾಲಾ ಬಳಿ ತಂಬಾಕು ಮಾರಾಟ- ಸಿಎಂ ಕಛೇರಿಗೆ ಪತ್ರ ಬರೆದ 3ನೇ ತರಗತಿ ಬಾಲಕಿ..! ; ತುರ್ತು ಸ್ಪಂದಿಸಿದ ಸಿಎಂ ಕಛೇರಿ- ಎರಡೇ ಗಂಟೆಯಲ್ಲಿ ಅಂಗಡಿ ಮೇಲೆ ಪೊಲೀಸ್ ದಾಳಿ

(ನ್ಯೂಸ್ ಕಡಬ) newskadaba.com ಕಡಬ, ಅ. 01. ಶಾಲಾ ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ತುರ್ತು ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಕಚೇರಿ, ನೀಡಿದ ಸೂಚನೆ ಮೇರೆಗೆ ಕಡಬ ಪೊಲೀಸರು ಅಂಗಡಿಯೊಂದಕ್ಕೆ ದಾಳಿ ನಡೆಸಿ ಮಾರಾಟವಾಗುತ್ತಿದ್ದ ತಂಬಾಕು ಮತ್ತು ಸಿಗರೇಟನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ತಂಬಾಕು ನಿಷೇಧ ಕಾಯ್ದೆಯಡಿ ಅಂಗಡಿಯಾತನಿಗೆ ದಂಡ ವಿಧಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕೈಕಂಬದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಅಯೊರ ಎಂಬಾಕೆ ಪತ್ರಿಕೆಯೊಂದಕ್ಕೆ ಪತ್ರ ಬರೆದಿದ್ದು, ಅದರಲ್ಲಿ ಶಾಲೆ ಬಳಿಯಿರುವ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದಾರೆ ಮತ್ತು ಅದರ ಪೊಟ್ಟಣ ಶಾಲೆ ಆವರಣದಲ್ಲಿ ಬಿದ್ದಿರುತ್ತದೆ. ನಿಯಮವಿದ್ದರೂ ನಿಷೇಧ ಮಾಡದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಳು. ಪತ್ರಿಕೆಯ ಸಂಪಾದಕೀಯ ಮಂಡಳಿ ಆ ಪತ್ರವನ್ನು ಸಿಎಂ ಸಚಿವಾಲಯದ ಕುಂದುಕೊರತೆ ವಿಭಾಗದ ವಿಶೇಷಾಧಿಕಾರಿ ಡಾ.ವೈಷ್ಣವಿ ಅವರಿಗೆ ರವಾನಿಸಿದ್ದರು. ಸಿಎಂ ಕಚೇರಿಯಿಂದ ಬಾಲಕಿ ಮನೆಗೆ ಕರೆ ಬಂದಿದ್ದು, ಪತ್ರದ ಬಗ್ಗೆ ವಿಚಾರಿಸಿದ್ದಾರೆ.

ನಂತರದ ಬೆಳವಣಿಗೆಯಲ್ಲಿ ಈ ಮಾಹಿತಿಯು ಸಿಎಂ ಕಚೇರಿಯಿಂದ ಪೊಲೀಸ್ ಇಲಾಖೆಗೆ ರವಾನೆಯಾಗಿದೆ. ಕಡಬ ಎಸ್​ಐ ಅಭಿನಂದನ್ ನೇತೃತ್ವದಲ್ಲಿ ಪೊಲೀಸರು ರಾತ್ರಿ 7.30ಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಶಾಲೆಯಿಂದ 20 ಮೀಟರ್ ದೂರದಲ್ಲಿ ನವೀನ್ ಎಂಬವರಿಗೆ ಸೇರಿದ ಧನಶ್ರೀ ಫ್ಯಾನ್ಸಿ ಮತ್ತು ಫೂಟ್​ವೇರ್ ಅಂಗಡಿಯಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದು ತಂಬಾಕು ನಿಷೇಧ ಕಾಯ್ದೆಯಡಿ ದಂಡ ವಿಧಿಸಿ ಎಚ್ಚರಿಕೆ ನೀಡಿ ದಾಳಿಯ ಮಾಹಿತಿಯನ್ನು ಸಿಎಂ ಕಚೇರಿಗೆ ರವಾನಿಸಿದ್ದಾರೆ.

error: Content is protected !!

Join the Group

Join WhatsApp Group