ನೆಟ್ಟಣ: ದೇವಸ್ಥಾನಕ್ಕೆಂದು ಆಗಮಿಸಿ ಹಿಂತಿರುಗಿ ಹೋಗಲು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು ► ಅತ್ತಿತ್ತ ಅಲೆದಾಡುತ್ತಿದ್ದ ಪ್ರೇಮಿಗಳನ್ನು ಹಿಡಿದು ಕಡಬ ಠಾಣೆಗೆ ಒಪ್ಪಿಸಿದ ಊರವರು

(ನ್ಯೂಸ್ ಕಡಬ) newskadaba.com ಕಡಬ, ಫೆ.08. ದೇವಸ್ಥಾನಕ್ಕೆಂದು ಆಗಮಿಸಿ ಹಿಂತಿರುಗಿ ಊರಿಗೆ ಹೋಗಲು ದುಡ್ಡು ಇಲ್ಲದ ಪರಿಣಾಮ ರೈಲ್ವೇ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಪ್ರೇಮಿಗಳಿಬ್ಬರನ್ನು ಊರವರು ವಿಚಾರಿಸಿ ಕಡಬ ಠಾಣೆಗೆ ಮಾಹಿತಿ ನೀಡಿದ ಘಟನೆ ನೆಟ್ಟಣದಲ್ಲಿ ನಡೆದಿದೆ.

ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಹಾಸನ ಮೂಲದ ನೂತನ್ ಎಂಬಾತ ತನ್ನ ಪ್ರೇಯಸಿ ಕಾಲೇಜು ವಿದ್ಯಾರ್ಥಿನಿಯನ್ನು ಸುಬ್ರಹ್ಮಣ್ಯಕ್ಕೆ ಬರಹೇಳಿದ್ದು, ಅದರಂತೆ ಯುವತಿ ಆಗಮಿಸಿದ್ದಾಳೆನ್ನಲಾಗಿದೆ. ಆಗಮಿಸುವಾಗ ಯುವಕ ರೈಲು ಪ್ರಯಾಣಕ್ಕೆ ಬೇಕಾಗುವಷ್ಟು ಹಣವನ್ನು ಮಾತ್ರ ತಂದಿದ್ದು, ಸುಬ್ರಹ್ಮಣ್ಯಕ್ಕೆ ತಲುಪಿದಾಗ ಇವರಲ್ಲಿದ್ದ ಹಣ ಖಾಲಿಯಾಗಿದೆ ಎನ್ನಲಾಗಿದೆ. ಬುಧವಾರ ರಾತ್ರಿ ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ಮಲಗಿದ ಇವರಲ್ಲಿ ಗುರುವಾರದಂದು ಬೆಳಿಗ್ಗೆ ತಿಂಡಿ ತಿನ್ನಲು ಹಣವಿಲ್ಲದೆ ಇದ್ದಾಗ ಯುವತಿಯು ಕಂಗಾಲಾಗಿದ್ದು, ಅಲೆದಾಡುತ್ತಿದ್ದ ಇವರನ್ನು ಸ್ಥಳೀಯರು ಗಮನಿಸಿ ಕಡಬ ಠಾಣೆಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಪ್ರೇಮಿಗಳಿಬ್ಬರನ್ನೂ ಠಾಣೆಗೆ ಕರೆದುಕೊಂಡು ಬಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಠಾಣೆಗೆ ಆಗಮಿಸಿದ ಯುವತಿಯ ಹೆತ್ತವರು ಮುಚ್ಚಳಿಕೆ ಬರೆಸಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ.

error: Content is protected !!

Join the Group

Join WhatsApp Group