ಎಗ್ ರೈಸ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಮುಗಿಸಿದ ಭೂಪ..!

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಸೆ. 18. ಎಗ್‌ರೈಸ್‌ ಹಾಗೂ ಚಿಕನ್ ಕಬಾಬ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಯುವಕನೋರ್ವ ಚಾಕುವಿನಿಂದ ಇರಿದು ಹತ್ಯೆಗೈದಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಡೆದಿದೆ.

ಹತ್ಯೆಯಾದವನನ್ನು ಗೈಬುಸಾಬ್ ಮುಲ್ಲಾ (34) ಎಂದು ಗುರುತಿಸಲಾಗಿದೆ. ಮುಸ್ತಾಕ್ ಜಂಗಿ  (20) ಕೊಲೆ ಆರೋಪಿ. ಕೃತ್ಯ ನಡೆಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಅಮೀನಗಡ ಬಸ್ ನಿಲ್ದಾಣದ ಬಳಿ ಎಗ್‌ರೈಸ್‌ ಅಂಗಡಿ ಇಟ್ಟುಕೊಂಡಿದ್ದ ಗೈಬುಸಾಬ್ ಬಳಿ ಬಂದ ಮುಸ್ತಾಕ್, ಎಗ್‌ರೈಸ್‌ ಹಾಗೂ ಕಬಾಬ್ ಕೇಳಿದ್ದಾನೆ. ಆಗಲೇ ಸಮಯ ತಡವಾಗಿದ್ದರಿಂದ ಎಲ್ಲವೂ ಖಾಲಿಯಾಗಿದೆ ಎಂದು ಅಂಗಡಿ ಮಾಲೀಕ ಹೇಳಿದ್ದಾನೆ. ಬಳಿಕ ಅಲ್ಲಿಂದ ಹೋಗಿದ್ದ ಮುಸ್ತಾಕ್ ಜಂಗಿ ಪುನಃ ಅಂಗಡಿ ಬಳಿ ಬಂದು ಚಾಕುವಿನಿಂದ ಗೈಬುಸಾಬ್ ಕುತ್ತಿಗೆಗೆ ತಿವಿದು ಕೊಲೆಗೈದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಮೀನಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.‌

Scroll to Top