(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 18. ಆರ್ಮಿ ಕ್ಯಾಂಪಿಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ಸಾವಿರಾರು ರೂಪಾಯಿ ವಂಚನೆ ಎಸಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ತೆಳ್ಳಾರು ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಯದರ್ಶಿನಿ ಗ್ಯಾಸ್ ಏಜೆನ್ಸಿ ಮಾಲಕ ಕೃಷ್ಣಮೂರ್ತಿ ಎಂಬವರಿಗೆ ಸೆ. 9ರಂದು ಅಪರಿಚಿತನೋರ್ವ ಕರೆ ಮಾಡಿ, ನಾನು ಇಂಡಿಯರ್ ಆರ್ಮಿಯ ಆಫೀಸರ್. ನಾವು ಕಾರ್ಕಳದ ಶಾಲೆಯೊಂದರಲ್ಲಿ ಆರ್ಮಿ ಕ್ಯಾಂಪ್ ಮಾಡಿದ್ದು ಈ ಕ್ಯಾಂಪ್ಗೆ 4 ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವಂತೆ ಹೇಳಿದ್ದನು. ಅದರಂತೆ ಕೃಷ್ಣಮೂರ್ತಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಸುನೀಲ್ ವಿನ್ಸೆಂಟ್ ಎಂಬಾತನೊಂದಿಗೆ ಆ ವ್ಯಕ್ತಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದು, ಅದರಂತೆ ಸುನೀಲ್ ಕರೆ ಮಾಡಿ ಗ್ಯಾಸ್ ಸಿಲಿಂಡರ್ ಬಗ್ಗೆ ವಿಚಾರಿಸಿದಾಗ, ಅಪರಿಚಿತ ಮೊದಲು ವೆರಿಫೈಗೆಂದು ನೀವು ನಮಗೆ ಹಣ ಹಾಕಬೇಕು, ನಂತರ ತಾವು ದುಪ್ಪಟ್ಟು ಹಣವನ್ನು ನಿಮಗೆ ಕೊಡುತ್ತೇವೆಂದು ತಿಳಿಸಿದ್ದನು.

ಅದನ್ನು ನಂಬಿದ ಸುನಿಲ್ ಹಂತಹಂತವಾಗಿ ಒಟ್ಟು 92,513 ರೂ. ಹಣವನ್ನು ಅಪರಿಚಿತನ ಖಾತೆಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಅಪರಿಚಿತ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.










