ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮುಲ್ಕಿ, ಸೆ. 18. ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚೂರಿ ತೋರಿಸಿ ಕರಿಮಣಿ ಸರ ಎಳೆದು ಪರಾರಿಯಾದ ಘಟನೆ ಕೊಲ್ನಾಡು ಎಂಬಲ್ಲಿ ರವಿವಾರದಂದು ನಡೆದಿದೆ.

 

ಕೊಲ್ನಾಡು ನಿವಾಸಿ ಸದಾಶಿವ ಶೆಟ್ಟಿ ಹಾಗೂ ಪತ್ನಿ ವಸಂತಿ ಶೆಟ್ಟಿ ಕೆಲಸದ ನಿಮಿತ್ತ ಹಳೆಯಂಗಡಿಗೆ ಹೋಗಿದ್ದವರು ವಾಪಸ್ ಬರುವಾಗ ಪತ್ನಿಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ್ದರು. ಅದರಂತೆ ವಸಂತಿ ಶೆಟ್ಟಿ ಮನೆಗೆ ಬಂದ ವೇಳೆ ಓರ್ವ ಬಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಪೆಟ್ರೋಲ್ ತುಂಬಿಸಲು ಬಾಟಲಿ ಬೇಕು ಎಂದು ಹೇಳಿದ್ದಾನೆ. ಈ ಸಂದರ್ಭ ವಸಂತಿ ಶೆಟ್ಟಿ ನೀರಿನ ಖಾಲಿ ಬಾಟಲಿ ಕೊಟ್ಟಿದ್ದು ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಅದೇ ವ್ಯಕ್ತಿ ಬಂದು ಬೇರೆ ಬಾಟಲಿ ಕೇಳಿದ್ದು, ವಸಂತಿ ಶೆಟ್ಟಿ ಅವರು ಮನೆಯ ಹೊರಗಡೆ ಬರುವಷ್ಟರಲ್ಲಿ ಮೂವರು ದುಷ್ಕರ್ಮಿಗಳು ಚೂರಿಯಿಂದ ಬೆದರಿಸಿ ಕರಿಮಣಿ ಸರವನ್ನು ಎಳೆದಿದ್ದಾರೆ. ಈ ವೇಳೆ ವಸಂತಿ ಶೆಟ್ಟಿ ಜೋರಾಗಿ ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಸಂದರ್ಭ ಕರಿಮಣಿ ಸರದ ಒಂದು ತುಂಡು ಸ್ಥಳದಲ್ಲಿ ಬಿದ್ದಿದೆ. ಸುಮಾರು ಐದು ಪವನ್ ಚಿನ್ನದ ಕರಿಮಣಿ ಸರ ಎಗರಿಸಿದ್ದಾರೆ ಎಂದು ವಸಂತಿ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

 

error: Content is protected !!

Join the Group

Join WhatsApp Group