ಬೆಳೆ ವಿಮೆ ಯೋಜನೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. 2023-24ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದೆ.

ಈ ಯೋಜನೆಯಡಿ ನೋಂದಾವಣೆಗೊಳ್ಳಲು ಬೆಳೆಸಲಾಗುವ ಬೆಳೆಯ ರೈತರ ಸರ್ವೇ ನಂಬರ್‍ನಲ್ಲಿ ಬೆಳೆ ಸಮೀಕ್ಷೆಯಡಿ ನಮೂದಾಗಿರುವುದು ಕಡ್ಡಾಯವಾಗಿದೆ. ಬೆಳೆ ಸಮೀಕ್ಷೆಯಡಿ ವಿಮೆ ಮಾಡಿಸಲಾಗುವ ಬೆಳೆಯು ನಮೂದಾಗದಿದ್ದ ಪಕ್ಷದಲ್ಲಿ ಇದೇ ಸೆ.15ರೊಳಗೆ ಬೆಳೆ ಸಮೀಕ್ಷೆ ಮಾಡಿ ಬೆಳೆ ನಮೂದಿಸಲಾಗುವುದೆಂದು ರೈತರಿಂದ ಒಪ್ಪಿಗೆ ಪತ್ರ ಪಡೆದು ಈ ಯೋಜನೆಯಡಿ ರೈತರನ್ನು ನೋಂದಾಯಿಸಲಾಗುವುದು. ತಪ್ಪಿದ್ದಲ್ಲಿ ಅಂತಹ ರೈತರ ನೋಂದಾವಣೆಯನ್ನು ತಿರಸ್ಕರಿಸಲಾಗುವುದು. ಆದ್ದರಿಂದ ಅಂತಹ ರೈತರು ತಾವೇ ಖುದ್ದಾಗಿ ಅಥವಾ ಬೆಳೆ ಸಮೀಕ್ಷೆ ಕೈಗೊಳ್ಳಲು ತಮ್ಮ ಗ್ರಾಮಕ್ಕೆ ನಿಯೋಜಿತರಾಗಿರುವ ಖಾಸಗಿ ನಿವಾಸಿಗಳ ಮುಖಾಂತರ ಬೆಳೆ ಸಮೀಕ್ಷೆ ಕೈಗೊಂಡು ವಿಮೆ ಮಾಡಿಸಿರುವ ಬೆಳೆಯನ್ನು ಬೆಳೆ ಸಮೀಕ್ಷೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group