ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಅಂತರ್ಜಾತಿ ಪ್ರೇಮವಿವಾಹ ಪ್ರಕರಣದ ಪ್ರೇಮಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಫೆ.07. ಸುಮಾರು ಎರಡು ದಶಕಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಅಂತರ್ಜಾತಿ ಪ್ರೇಮ ಪ್ರಕರಣದ ಪ್ರೇಮಿ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಾತನನ್ನು ಸುಮಾರು 26 ವರ್ಷಗಳ ಹಿಂದೆ ರಾಜ್ಯಾದ್ಯಂತ ಸುದ್ದಿಯಾಗಿ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆ ನಿವಾಸಿ ಭಾಸ್ಕರ್ ಕೊಠಾರಿ(47) ಎಂದು ಗುರುತಿಸಲಾಗಿದೆ. 1992 ರಲ್ಲಿ ಮುಸ್ಲಿಂ ಯುವತಿಯಾದ (ಆಶಾ) ಮುನಾವರ್ ಳನ್ನು ಪ್ರೀತಿಸಿ ಮದುವೆಗೆ ಅಣಿಯಾಗುತ್ತಿದ್ದಂತೆಯೇ ಇವರಿಬ್ಬರ ಪ್ರೀತಿಯ ವಿಚಾರ ಮುನಾವರ್ ಕುಟುಂಬಕ್ಕೆ ತಿಳಿದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದ. ಈ ಸಂದರ್ಭ ಇವನನ್ನು ಅನ್ಯಕೋಮಿನವರು ಕೊಲೆ ಮಾಡಿದ್ದಾರೆ ಎಂಬ ಸುಳ್ಳು ಸುದ್ಧಿ ಹಬ್ಬಿ ಕೋಮು ಗಲಭೆಯುಂಟಾಗಿ ಇಡೀ ಕುಂದಾಪುರವೇ ಹೊತ್ತಿ ಉರಿದಿತ್ತು. ಈ ನಡುವೆ ಮುನಾವರ್ ಕೂಡ ನಾಪತ್ತೆಯಾಗಿ ಎರಡೂ ಕಡೆಗಳಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಕೋಮು ಸಂಘರ್ಷಕ್ಕೆ ಕಂಡ್ಲೂರಿನ ಓರ್ವ ಉದ್ಯಮಿಯ ಎಕ್ರೆಗಟ್ಟಲೇ ತೋಟವನ್ನು ಸಂರ್ಪೂಣ ಹಾನಿಗೊಳಿಸಲಾಗಿತ್ತು. ಆಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರಕ್ಕೆ ಡಿವೈಎಸ್‌ಪಿಯಾಗಿದ್ದ ದಳಗಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಪುವಿನಲ್ಲಿ ಈ ಜೋಡಿಗಳನ್ನ ಬಂಧಿಸಿ ಕರೆತಂದು ನಂತರ ಎರಡೂ ಕಡೆಯವರಿಗೆ ಸಮಾಧಾನಪಡಿಸಿದ ಪೊಲೀಸರು ಇಬ್ಬರ ವಿವಾಹವನ್ನ 1992 ರ ಫೆಬ್ರವರಿಯಲ್ಲಿ ಕುಂದಾಪುರದ ನಾರಾಯಣ ಗುರು ಸಭಾಭವನದಲ್ಲಿ ನೆರವೇರಿಸಿದ್ದರು.

ಪ್ರೇಮ ವಿವಾಹವಾದ ಬಳಿಕ ಮುನಾವರ್ ಹೆಸರು ಆಶಾ ಆಗಿ ಬದಲಾಗುತ್ತದೆ. ಆದರೆ ಭಾಸ್ಕರ್ ಮತ್ತು ಆಶಾ ನಡುವಿನ ಕೌಟುಂಬಿಕ ಜೀವನ ಸುಖಕರವಾಗಿರಲಿಲ್ಲ. ಕುಡಿತದ ಚಟಕ್ಕೆ ಒಳಗಾಗಿದ್ದ ಭಾಸ್ಕರ್‌ನಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಆದರೆ ಆಶಾ ಬೀಡಿಕಟ್ಟಿ ತನ್ನ ಜೀವನ ನಿರ್ವಹಣೆ ನಡೆಸುತ್ತಿದ್ದರು. ಹಲವು ವರ್ಷಗಳ ಕಾಲ ಮಕ್ಕಳಾಗದೇ ಸಂಕಟಪಟ್ಟಿದ್ದ ಇವರಿಗೆ 6 ವರ್ಷಗಳ ಹಿಂದೆ ಹೆಣ್ಣುಮಗುವೊಂದು ಹುಟ್ಟಿತ್ತು. ಮಂಗಳವಾರದಂದು ತನ್ನ ತಮ್ಮ ದಿವಾಕರ್‌ರ ಗೃಹಪ್ರವೇಶ ಸಮಾರಂಭದಲ್ಲಿ ಭಾಸ್ಕರ್ ಸುಳಿವೇ ಇಲ್ಲದ ಕಾರಣ, ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಸುತ್ತಮುತ್ತಲಿನ ಪ್ರದೇಶವನ್ನ ಹುಡುಕಾಡಿದ ಮನೆಯವರಿಗೆ ಬಾವಿಯೊಳಗೆ ಪರಿಶೀಲಿಸಿದಾಗ ಭಾಸ್ಕರ್ ಕೊಠಾರಿ ಮೃತದೇಹ ಬಾವಿಯೊಳಗೆ ಸಿಲುಕಿಕೊಂಡಿರುವುದು ಕಂಡು ಬಂದಿದೆ. ತಮ್ಮನ ಮನೆಯ ಗೃಹಪ್ರವೇಶ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ ಕೆಲಕಾಲ ಕಾದ ಸ್ಥಳೀಯರು ಗೃಹಪ್ರವೇಶ ಸಮಾರಂಭ ಮುಗಿದ ಬಳಿಕ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶಂಕರನಾರಾಯಣ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group