ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 27. ತನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಆ. 22ರಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಕಟ್ಟತ್ತಾರು, ನಿಡ್ಯಾಣ ನಿವಾಸಿ ಅಬ್ದುಲ್ ನಾಸಿರ್ ರವರು ಚಿಕಿತ್ಸೆ ಫಲಿಸದೇ ಭಾನುವಾರದಂದು ಕೊನೆಯುಸಿರೆಳೆದಿದ್ದಾರೆ.


ಆತ್ಮಹತ್ಯೆಗೆ ಯತ್ನಿಸುವ ಮುನ್ನ ‘ನಾನು ಬೆಳ್ಳಾರೆ ಸಮೀಪದ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದು, ಅದ್ರಾಮ ಮತ್ತು ಕುಟುಂಬದವರು ಸೇರಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ’ ಎಂದು ಆರೋಪಿಸಿ ನಾಸಿರ್ ವಿಡಿಯೋ ರೆಕಾರ್ಡ್ ಮಾಡಿದ್ದು, ಇದರಿಂದ ಮನನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಅದ್ರಾಮ ಹಾಗೂ ಮತ್ತೋರ್ವರ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರಿಗೇ ಮೊಬೈಲ್ ವೀಡಿಯೋ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದರು. ಕಾರಿನಲ್ಲಿದ್ದವರನ್ನು ವೀಡಿಯೋದಲ್ಲಿ ತೋರಿಸುತ್ತಾ ನನ್ನ ಸಾವಿಗೆ ಇವರೇ ಕಾರಣ, ನಾನು ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಹೇಳಿ ವೀಡಿಯೋ ಕೊನೆಗೊಳಿಸಲಾಗಿತ್ತು. ಬಳಿಕ ನಾಸಿರ್ ಅವರು ಪುತ್ತೂರು ರೈಲ್ವೇ ಸ್ಟೇಷನ್ ಬಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದ್ದು, ಆ ಬಳಿಕ ಅವರನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

Also Read  ಮಣಿಪಾಲ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಭೂಪ ➤ ಆರೋಪಿ ಪೊಲೀಸರ ವಶಕ್ಕೆ

error: Content is protected !!
Scroll to Top