ಇಂಜೆಕ್ಷನ್ ಅಡ್ಡ ಪರಿಣಾಮ- ಚಿಕಿತ್ಸೆ ಫಲಿಸದೇ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 20. ಜ್ವರಕ್ಕೆಂದು ವೈದ್ಯರು ನೀಡಿದ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮ ಉಂಟಾಗಿ ಕುಂದಾಪುರ ಮೂಲದ ಯುವಕನೊಬ್ಬ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ.


ಮೃತ ಯುವಕನನ್ನು ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಬೆದ್ರಳ್ಳಿಯ ದಿ. ಚಂದ್ರಶೆಟ್ಟಿ ಎಂಬವರ ಮಗ ಅಮರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದ ಅಮರ್ ಶೆಟ್ಟಿ, ಆಗಸ್ಟ್ 13ರಂದು ಕೆ.ಪಿ. ಅಗ್ರಹಾರದ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಮೈಬಿಸಿ ಇರುವುದನ್ನು ಗಮನಿಸಿ ಸಮೀಪದ ಕ್ಲಿನಿಕ್ ಗೆ ತೆರಳಿದಾಗ ಅಲ್ಲಿನ ವೈದ್ಯರು ಜ್ವರ ಎಂದು ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಇದ್ದಕ್ಕಿದ್ದಂತೆ ಇಂಜೆಕ್ಷನ್ ನೀಡಿದ್ದ ಸೊಂಟದ ಭಾಗ ಊದಿಕೊಂಡು, ನೋವು ಕಾಣಿಸಿಕೊಂಡಿದೆ. ಇದರಿಂದ ಮತ್ತೆ ಅಮರ್ ಶೆಟ್ಟಿ ಆಗಸ್ಟ್ 15ರಂದು ರಾಜಾಜಿನಗರದ ತಮ್ಮ ರೂಮಿನ ಸಮೀಪದ ‘ಕ್ಲಿನಿಕ್’ಗೆ ತೆರಳಿದ್ದು, ಅಲ್ಲಿಯೂ ವೈದ್ಯರು ಮಾತ್ರೆಗಳನ್ನು ನೀಡಿ, ನೋವು ಕಡಿಮೆಯಾಗದಿದ್ದರೆ ಚಿಕಿತ್ಸೆ ನೀಡುವುದಾಗಿ ಹೇಳಿ ಕಳುಹಿಸಿದ್ದರು.

ಆದರೆ ನೋವು ಕಡಿಮೆಯಾಗದೇ ಇದ್ದಾಗ ಅಮರ್ ಶೆಟ್ಟಿಯನ್ನು ಆಗಸ್ಟ್ 16ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪರೀಕ್ಷಿಸಿದ ವೈದ್ಯರು ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿದೆ ಎಂದು ಕುಟುಂಬಿಕರಿಗೆ ತಿಳಿಸಿದ್ದಾರೆ. ಆದರೆ ಆಗಸ್ಟ್ 18ರ ಶುಕ್ರವಾರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group