ನಮ್ಮ ಜವಾಬ್ದಾರಿ ನಿಭಾಯಿಸೋಣ- ರವೀಂದ್ರನಾಥ್

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 16. ಮಂಗಳೂರಿನ ಬಿಜೈ ಕಾಪಿಕಾಡಿನ ಬಾರೆಬೈಲ್ ಬಡಾವಣೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬಡಾವಣೆಯ ನಿವಾಸಿ,  ಜ್ಞಾನವೃಧ್ಧರಾದ ಹಿರಿಯ ನಾಗರಿಕ ಶ್ರೀ ವಿಠಲ ಭಟ್ ರವರು ಧ್ವಜಾರೋಹಣಗೈದು ತ್ರಿವರ್ಣ ಧ್ವಜವನ್ನು ಅರಳಿಸಿದರು.  ನೆರೆದವರೆಲ್ಲರೂ ಸೇರಿ ರಾಷ್ಟ್ರಗೀತೆಯನ್ನು ಅಭಿಮಾನ ಪೂರ್ವಕವಾಗಿ ಹಾಡಿ ಧ್ವಜ ವಂದನೆಯನ್ನು ಸಲ್ಲಿಸಿದರು. ನಗರದ ಪ್ರಸಿದ್ಧ ಹಿರಿಯ ವಕೀಲರಾದ ಶ್ರೀ ಪಿ.ಎಸ್.ರವೀಂದ್ರನಾಥರವರು ಗೌರವ ಅತಿಥಿಗಳಾಗಿ ಸ್ವಾತಂತ್ರ್ಯದ  ಹಾಗೂ ತ್ರಿವರ್ಣ ಧ್ವಜದ ಪ್ರಾಮುಖ್ಯತೆ ಬಗ್ಗೆ ಸುಂದರವಾಗಿ ಮಾತನಾಡಿ ನಮ್ಮೆಲ್ಲರ ಜವಾಬ್ದಾರಿಯನ್ನೂ ತಿಳಿಸಿಕೊಟ್ಟರು. ಅಂತೆಯೇ ಇನ್ನೋರ್ವ ಅತಿಥಿ ಸ್ಥಾನದಿಂದ ನಿವೃತ್ತ ಪ್ರಾಚಾರ್ಯ ಹಾಗೂ ಸದರಿ ನಗರದ ಸಂಚಾರ ಮೇಲ್ವಿಚಾರಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀ ಎಂ.ಎಲ್. ಸುರೇಶ್ ನಾಥ್ ರವರು ಸ್ವತಂತ್ರ ದೇಶದಲ್ಲಿ ಶಾಂತಿ, ಸಮೃದ್ಧಿ, ಸಾಧನೆ ಮತ್ತು ಅಭಿವೃದ್ಧಿಯ ಹಾದಿಯ ಸಮ್ಮಿಳನದಲ್ಲಿ ನಾಗರಿಕರ ಪಾತ್ರವನ್ನು ವಿವರಿಸಿದರು.

Also Read  ಹಳೆನೇರಂಕಿ: ಅಕ್ರಮ ಮದ್ಯ ಮಾರಾಟದ ವೇಳೆ ಅಬಕಾರಿ ಅಧಿಕಾರಿಗಳ ದಾಳಿ ➤ ದ್ವಿಚಕ್ರ ವಾಹನ ಸಹಿತ ಮದ್ಯ ವಶಕ್ಕೆ, ಆರೋಪಿ ಪರಾರಿ

ತದನಂತರ ಬಡಾವಣೆಯ ನಿವಾಸಿಗಳಾದ ಶ್ರೀಮತಿ ರೂಪ ಅಶ್ವಿನ್ ಮತ್ತು ಶ್ರೀಮತಿ ಸಂಧ್ಯಾ  ಜೋನಸ್ ರವರ ನೇತೃತ್ವದಲ್ಲಿ ದೇಶಭಕ್ತಿ ಸಮೂಹ ಗಾಯನವು ನೆರೆದಿದ್ದ ಎಲ್ಲರನ್ನೂ ರೋಮಾಂಚನಗೊಳಿಸಿತು. ಕಾರ್ಯಕ್ರಮವನ್ನು ಆಯೋಜಿಸಿದ್ದ ಕೊಡುಗೈ ದಾನಿ, ನಗರದ ಪ್ರಮುಖ ಉದ್ಯಮಿ ಶ್ರೀ ಸುನಿಲ್ ಜೋನಸ್ ರವರು ಧನ್ಯವಾದ ಸಮರ್ಪಣೆಗೈದರು. ಗೃಹರಕ್ಷಕ ದಳದ ಸಮಾದೇಷ್ಟ, ಸರಳ, ಜನಾನುರಾಗಿ ಡಾಕ್ಟರ್ ಮುರಲಿ ಮೋಹನ ಚೂಂತಾರು ಅವರು ಕಾರ್ಯಕ್ರಮವನ್ನು ಸಾಂದರ್ಭಿಕ ಸವಿನುಡಿಯೊಂದಿಗೆ ಚಿಕ್ಕದಾಗಿ ಚೊಕ್ಕವಾಗಿ ನಡೆಸಿಕೊಟ್ಟರು. ಉಪಹಾರದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಬಡಾವಣೆಯ ಸುಮಾರು 150 ಮಂದಿ ಈ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

error: Content is protected !!
Scroll to Top