ಇಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯಿಂದ ಬೃಹತ್ ಸಾರ್ವಜನಿಕ ಸಮಾವೇಶ ► ಬಜೆಟ್ ಮಂಡನೆಯ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.04. ಭಾನುವಾರದಂದು ರಾಜ್ಯ ರಾಜಧಾನಿಯಲ್ಲಿ ಬಿಜೆಪಿಯು ಪರಿವರ್ತನಾ ಯಾತ್ರೆಯ ಐತಿಹಾಸಿಕ ಸಮಾರೋಪ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಬಳಿಕ ಪ್ರಧಾನಿ ಮೋದಿ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡುತ್ತಿರುವುದರಿಂದ ಇಡೀ ದೇಶದ ಗಮನ ಬೆಂಗಳೂರಿನತ್ತ ನೆಟ್ಟಿದೆ.

ರಾಜ್ಯ ಬಿಜೆಪಿ ನಾಯಕರೂ ಕೂಡ ಮೋದಿ ಸಮಾವೇಶಕ್ಕೆ ಭಾರೀ ಸಿದ್ಧತೆ ನಡೆಸಿದ್ದು, ಬೆಂಗಳೂರಿನ ಪ್ರತಿ ವಾರ್ಡ್ ವಾರ್ಡ್​ನಲ್ಲೂ ಆಟೋಗಳಿಗೆ ಮೈಕ್ ಕಟ್ಟಿಕೊಂಡು ಪ್ರಚಾರ ಮಾಡುವ ಕೆಲಸ ಶುರುವಾಗಿದೆ. ಕಾರ್ಯಕ್ರಮ ನಡೆಯುವ ಪ್ಯಾಲೇಸ್ ಗ್ರೌಂಡಲ್ಲಿ 20 ಅಡಿ ಎತ್ತರ ಹಾಗೂ 60X80 ಅಡಿ ಉದ್ದಗಲದ ಬಹುದೊಡ್ಡ ವೇದಿಕೆ ಸಿದ್ಧವಾಗಿದೆ. ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬರುವ ಜನರಿಗೆ ಮಾಹಿತಿ ನೀಡಲು ಯುವ ಕಾರ್ಯಕರ್ತರ ಪಡೆಯನ್ನು ಸಜ್ಜು ಮಾಡಲಾಗಿದೆ. ಸಮಾವೇಶ ನಡೆಯುವ ಪಕ್ಕದಲ್ಲೇ 2 ಮಿನಿ ಆಸ್ಪತ್ರೆ ರೆಡಿ ಮಾಡಿದ್ದು, ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. 4 ಲಕ್ಷ ಜನರನ್ನು ಸಮಾವೇಶಕ್ಕೆ ಸೇರಿಸಲು ಬಿಜೆಪಿ ಪ್ಲಾನ್ ಮಾಡಿದ್ದು, ಮೋದಿಯವರ ಭಾಷಣವನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾಕಷ್ಟು ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಯುವ ಜನತೆಗೆ ಮೋದಿ ಹೇಳಿಕೆ ತಲುಪಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.  ಇನ್ನೂ ಬೃಹತ್ ವೇದಿಕೆ ಮೇಲೆ ಮುಖ್ಯಮಂತ್ರಿ ಆಭ್ಯರ್ಥಿ ಬಿ.ಎಸ್.​​​ ಯಡಿಯೂರಪ್ಪ ಸೇರಿದಂತೆ 27 ಮಂದಿ ಪ್ರಮುಖ ನಾಯಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಒಟ್ಟು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪಕ್ಷದ ಪ್ರಮುಖ ನಾಯಕರು ಹಾಗೂ ಕೇಡರ್ ಹಂತದ ನಾಯಕರಿಗೆ ಪ್ರತ್ಯೇಕ ಎಂಟ್ರಿ ಹಾಗೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಜನರ ಆಗಮನಕ್ಕೆ 8 ಗೇಟ್​ಗಳ ಮೂಲಕ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ.

error: Content is protected !!

Join the Group

Join WhatsApp Group