ಫೆಬ್ರವರಿ 04 ಕ್ಕೆ ಮತ್ತೊಮ್ಮೆ ಕರ್ನಾಟಕ ಬಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.01. ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.04 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ರಾಜ್ಯ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುವಂತೆ ಮನವಿ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಅವರು ಬುಧವಾರದಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾವು ಜನವರಿ 25 ರಂದು ಸ್ವಯಂ ಪ್ರೇರಿತವಾಗಿ ಕರ್ನಾಟಕ ಬಂದ್ ನಡೆಸಿದ್ದೇವೆ. ಇದಕ್ಕೆ ಯಾವ ಸರ್ಕಾರ ಕೂಡ ಬೆಂಬಲ ನೀಡಿರಲಿಲ್ಲ. ಆದರೆ ಬಿಜೆಪಿ ನಾಯಕರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಅವರು ಬಿಜೆಪಿಯವರ ಅ ನಾಲಗೆ ಸರಿ ಇಲ್ಲ. ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಟ್ಟು ಪ್ರಧಾನ ಮಂತ್ರಿ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಫೆ.04 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ 03ನೇ ತಾರೀಕಿನ ಒಳಗಡೆ ಮಹದಾಯಿ ನೀರಿನ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಭರವಸೆ ಕೊಡಿಸಿ. ಇಲ್ಲದೇ ಇದ್ದರೆ 04 ರಂದು ಬೆಂಗಳೂರು ಬಂದ್ ಮಾಡಬೇಕಾಗುತ್ತದೆ. ನಮಗೆ ಸ್ಪಷ್ಟವಾದ ಭರವಸೆ ಕೊಡಿಸಬೇಕು. ಶನಿವಾರ ಮಧ್ಯಾಹ್ನದ ತನಕ ಕಾಯುತ್ತೇವೆ. ಮಧ್ಯಾಹ್ನದ ಒಳಗಡೆ ಭರವಸೆ ಸಿಗದೇ ಹೋದರೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಡೆಡ್‍ಲೈನ್ ನೀಡಿದ್ದಾರೆ.

error: Content is protected !!

Join the Group

Join WhatsApp Group