ನಂತೂರು ಫ್ಲೈಓವರ್ ನಿರ್ಮಾಣಕ್ಕೆ 600 ಮರಗಳ ಮಾರಣಹೋಮ – ಪರಿಸರ ಪ್ರೇಮಿಗಳಿಂದ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು. ಜು. 21. ರಸ್ತೆ ಅಗಲೀಕರಣದ ಹೆಸರಿನಲ್ಲಿ ನೂರಾರು ವರ್ಷಗಳಿಂದ ಬೆಳೆದ ಮರಗಳು ಧರೆಗುರುತ್ತಲೇ ಇದ್ದು, ಕಡಿದ ಮರಗಳಿಗೆ ಬದಲಾಗಿ ಮತ್ತೆ ಗಿಡ-ಮರಗಳನ್ನು ನೆಡುವವರು ಯಾರು ಅನ್ನೋದೇ ಪ್ರಶ್ನೆಯಾಗಿ ಉಳಿದಿದೆ. ಪರಿಸರಪ್ರೇಮಿಗಳು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ರಾಜ್ಯ ಸರಕಾರ ಹಾಗೂ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಬುಡಸಮೇತ ಉರುಳಿಸುತ್ತಲೇ ಇದ್ದಾರೆ.

ಇದೀಗ ನ್ಯಾಷನಲ್ ಹೈವೇ ಪ್ರಾಧಿಕಾರವು ವಾಹನ ದಟ್ಟಣೆ ನಿಯಂತ್ರಿಸುವ ಹಿನ್ನೆಲೆ ನಂತೂರು ಜಂಕ್ಷನ್‌ ನಿಂದ ಕೆಪಿಟಿ ಜಂಕ್ಷನ್‍ವೆರೆಗೆ 1.6 ಕಿ.ಮೀ ವ್ಯಾಪ್ತಿಯಲ್ಲಿ ವೆಹಿಕ್ಯುಲರ್ ಓವರ್ ಪಾಸ್ ನೆಪದಲ್ಲಿ 602 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಇವುಗಳ ಪೈಕಿ 370 ಮರಗಳನ್ನು ಸ್ಥಳಾಂತರಿಸಬಹುದು. ಇನ್ನುಳಿದಂತೆ 232 ಮರಗಳನ್ನು ಕಡಿಯಲೇಬೇಕಾದ ಅನಿವಾರ್ಯತೆಯಿದೆ ಎಂದು ಹೇಳಲಾಗಿದೆ.

ಮರಗಳ ನಾಶಕ್ಕೆ ಪರಿಸರ ಪ್ರೇಮಿಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ತಮ್ಮಿಂದ ಅಡ್ಡಿಯಿಲ್ಲ. ಆದರೆ, ಅಭಿವೃದ್ದಿ ಹೆಸರಿನಲ್ಲಿ ಪದೇಪದೇ ಇದೇತರ ಮರಗಳನ್ನು ಕಡಿಯುವುದೇಕೆ. ಈಗಾಗಲೇ ಭೂಮಿಯ ತಾಪಮಾನ ಏರಿಕೆಯಾಗುತ್ತಿದ್ದು, ಅತಿವೃಷ್ಟಿ, ಅನಾವೃಷ್ಟಿಗಳಿಂದ ಜನತೆ ಕಂಗಾಲಾಗಿದ್ದಾರೆ. ಆದರೆ ಸರಕಾರ ಮಾತ್ರ ಸತ್ಯಾಂಶ ಅರಿಯದೇ ಅಭಿವೃದ್ಧಿಯ ಮೊರೆ ಹೋಗುತ್ತಿದ್ದಾರೆ. ರಸ್ತೆ ಅಭಿವೃದ್ದಿಗೆ ಮಸೀದಿ, ಮಂದಿರಗಳನ್ನು ಉಳಿಸಿ ಸಾಧ್ಯವಾಗಿದ್ದಲ್ಲಿ ಕೆಪಿಟಿಯಲ್ಲೂ ಅದೇ ಪ್ರಯತ್ನವಾಗಲಿ ಎಂದಿದ್ದಾರೆ.

ಜನದಟ್ಟಣೆ ನಿಯಂತ್ರಣಕ್ಕೆ ಫ್ಲೈ ಓವರ್ ನಿರ್ಮಿಸುವ ಬಗ್ಗೆ ಪರಿಸರ ಪ್ರೇಮಿಗಳ ಮನವಿ ಬೆನ್ನಲ್ಲೇ ಯೋಜನೆಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಯೋಜನೆ ಅಧಿಕ ವೆಚ್ಚದಾಯಕ. ಆದರೂ ಮಂಗಳೂರಿನ ಸೂಕ್ಷತೆಯನ್ನು ಗಮನದಲ್ಲಿರಿಸಿ ವೆಚ್ಚ ಹೆಚ್ಚಾದರೂ ಮರಗಳನ್ನು ಉಳಿಸಿ ವರ್ಟಿಕಲ್ ಹೈವೇ ನಿರ್ಮಾಣದ ಅಗತ್ಯವಿದೆ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ. ಈಗಾಗಲೇ ಎನ್‌ಎಚ್‌ಎಐನಿಂದ ಈಗಿನ ಯೋಜನೆಯ ಡಿಪಿಆರ್ ಪಡೆದು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈಗಿನ ಮಟ್ಟದಿಂದ ಸುಮಾರು 7.5 ಅಡಿಯಷ್ಟು ಹೆದ್ದಾರಿಯನ್ನು ಅಗೆದು ತಳಮಟ್ಟದಲ್ಲಿ ಕೊಂಡೊಯ್ಯಲಾಗುವುದು, ಕೆಪಿಟಿ ಜಂಕ್ಷನ್ ಹಾಗೂ ನಂತೂರು ಜಂಕ್ಷನ್‌ಗಳಲ್ಲಿ ವಾಹನ ಮೇಲೇತುವೆ ಬರಲಿದೆ. ಇದು ಒಟ್ಟು 40 ಕೋಟಿ ರೂ. ಯೋಜನೆಯಾಗಿದೆ.

error: Content is protected !!

Join the Group

Join WhatsApp Group