ಗುದ್ದಲಿಯಿಂದ ಹೊಡೆದು ತಂದೆಯನ್ನೇ ಕೊಂದ ಪುತ್ರಿ

(ನ್ಯೂಸ್ ಕಡಬ) newskadaba.com ರಾಮನಗರ. ಜು. 20. ಪುತ್ರಿಯೋರ್ವಳು ಕ್ಷುಲ್ಲಕ ಕಾರಣಕ್ಕೆ  ಗುದ್ದಲಿಯಿಂದ ತನ್ನ ತಂದೆಯನ್ನೇ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹುಚ್ಚೀರಯ್ಯ(68) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಮಗಳನ್ನು ಪುಷ್ಪ (30) ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಆಕೆ ಸ್ಥಳದಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಆರೋಪಿ ಪುಷ್ಪಾ ಗೃಹಿಣಿಯಾಗಿದ್ದು, ಕೆಲವು ವರ್ಷಗಳ ಹಿಂದೆ ತನ್ನ ಪತಿಯೊಂದಿಗೆ ಜಗಳವಾಡಿಕೊಂಡು ಬಂದು ಪೋಷಕರ ಮನೆಯಲ್ಲಿ ವಾಸವಾಗಿದ್ದು, ಮಾನಸಿಕವಾಗಿ ನೊಂದಿದ್ದಳು. ಮನೆಯಲ್ಲಿ ಊಟ ಮಾಡುವ ವೇಳೆ ತಂದೆ ಮತ್ತು ಮಗಳ ನಡುವೆ ಜಗಳ ಆರಂಭವಾಗಿದೆ, ಈ ವೇಳೆ ಪುಷ್ಪ ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದಿದ್ದು, ಪರಿಣಾಮ ಹುಚ್ಚೀರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಚನ್ನಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

error: Content is protected !!

Join the Group

Join WhatsApp Group