ಕೊರಗಜ್ಜನ ಕಟ್ಟೆಗೆ ಬೆಂಕಿಯಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆ- ಆರೋಪಿಗಳ ಶೀಘ್ರ ಬಂಧನಕ್ಕೆ ಹಿಂದೂ ಸಂಘಟನೆಗಳ ಆಗ್ರಹ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 12. ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಬಾಡಾರು ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ದೇಗುಲಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗಕಲ್ಲು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು ಇದರ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಹೆಗ್ಡೆ ಅವರು ನೀಡಿದ ದೂರಿನಂತೆ ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಮೊದಲು ಕೊರಗಜ್ಜ ಕಟ್ಟೆಯು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಇದ್ದು, ಅದನ್ನು ಊರಿನ ಹಿರಿಯರು ಸೇರಿಕೊಂಡು ಆರಾಧಿಸಿಕೊಂಡು ಬರುತ್ತಿದ್ದರು. ಈ ಕೊರಗಜ್ಜ ಕಟ್ಟೆಯನ್ನು ಹರೀಶ್ ಮತ್ತು ಇತರರು ಸೇರಿಕೊಂಡು ಊರಿನ ಸಾರ್ವಜನಿಕ ಭಕ್ತಾಧಿಗಳಿಗೆ ತಿಳಿಸದೇ ತಮ್ಮ ಸ್ವಂತ ಸ್ಥಳಕ್ಕೆ ಕೊಂಡುಹೋಗಿ ಪ್ರತಿಷ್ಠಾಪಿಸಿ, ತದನಂತರ ಡಾ. ರಾಜೇಶ್ ಮತ್ತಿತರರು ಸೇರಿ ಜುಲೈ 6ರಂದು ವಿವಾದಿತ ಕೊರಗಜ್ಜ ಕಟ್ಟೆಯನ್ನು ಕೆಡವಿ ಹೊಸದಾಗಿ ಕೆಸರು ಕಲ್ಲು ಹಾಕಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್ ‌ಹೆಗ್ಡೆ ಮತ್ತು ಇತರ ಭಕ್ತಾಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಡಾ. ರಾಜೇಶ್ ರವರು ಅವರ ಸ್ವಂತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ಹಳೆಯ ಕೊರಗಜ್ಜ ಕಟ್ಟೆಯನ್ನು ಪ್ರದೀಪ್ ಕುಮಾರ್ ಮತ್ತು ಇತರ ಸಾರ್ವಜನಿಕ ಭಕ್ತರು ಚಪ್ಪರ ಹಾಕಿ ಆರಾಧಿಸಿಕೊಂಡು ಬರುತ್ತಿದ್ದರು.

Also Read  ಕೆಂಜಾಳ: ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ➤ ಸಿನಿಮೀಯ ಶೈಲಿಯಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಜುಲೈ 11ರಂದು ಬೆಳಗ್ಗೆ 10:30ರ ಸುಮಾರಿಗೆ ಆರೋಪಿ ಹರೀಶ್ ಪೂಜಾರಿ ಇತರ ಆರೋಪಿಗಳಾದ ಡಾ.ರಾಜೇಶ್, ರಮೇಶ್ ಕುಡ್ಮೇರು, ಓಂ ಪ್ರಸಾದ್ ಮತ್ತು ಪ್ರಶಾಂತ್ ಬಂಟ್ವಾಳರವರ ಕುಮ್ಮಕ್ಕಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿ ದೂರುದಾರರು ಮತ್ತು ಇತರ ಸಾರ್ವಜನಿಕ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟುಮಾಡಿದ್ದಾರೆ.

Also Read  ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ ➤ ನೇಪಾಳದ ಯುವಕ ಸೇರಿ ಇಬ್ಬರ ಬಂಧನ

ಈ ಕುರಿತು ಪ್ರದೀಪ್ ಕುಮಾರ್ ಹೆಗ್ಡೆ ನೀಡಿದ ದೂರಿನಂತೆ ಅಕ್ರಮ 39/2023 ಕಲಂ: 295(A), 436,109 ಜೊತೆಗೆ 34 ಐ.ಪಿ.ಸಿ ಯಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

error: Content is protected !!
Scroll to Top