ಟಿವಿ ಮಾರಾಟದ ವಿಚಾರದಲ್ಲಿ ದಂಪತಿ ಆತ್ಮಹತ್ಯೆ ➤ ತಂದೆ ತಾಯಿಯ ದುಡುಕಿನ ನಿರ್ಧಾರಕ್ಕೆ ತಬ್ಬಲಿಯಾದ ಮಕ್ಕಳು

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ.25. ಟಿವಿ ಮಾರಾಟದ ವಿಚಾರದಲ್ಲಿ ಆರಂಭವಾದ ಜಗಳ ದಂಪತಿಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಭಾನುವಾರದಂದು ಕಾರ್ಕಳದಿಂದ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕಾರ್ಕಳ ತಾಲೂಕಿನ ನಲ್ಲೂರು ಹುರ್ಲಾಡಿ ನಿವಾಸಿ ಮುಂಬಯಿ ಹೊಟೇಲ್ ಉದ್ಯಮಿಯ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ದಂಪತಿ ಇಮ್ಯಾನುಲ್ ಸಿದ್ಧಿ (40) ಹಾಗೂ ಯಶೋಧಾ (32) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ದಂಪತಿಯ ನಡುವೆ ಟಿವಿ ಮಾರಾಟದ ವಿಚಾರದಲ್ಲಿ ಜಗಳ ಉಂಟಾಗಿದೆ. ಅನ್ಯೋನ್ಯತೆಯಿಂದಿದ್ದ ದಂಪತಿಗಳ ನಡುವೆ ಇತ್ತೀಚೆಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಭಾನುವಾರದ ಜಗಳದಿಂದ ಮನನೊಂದ ಪತ್ನಿ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ರಕ್ಷಣೆಗೆ ಮುಂದಾದ ಆಕೆಯ ಪತಿಯೂ ಅದೇ ಕೆರೆಯಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಕಳೆದ ಎರಡು ವರ್ಷಗಳಿಂದ ಕಾರ್ಕಳಕ್ಕೆ ಆಗಮಿಸಿದ್ದ ಇವರು ತೋಟದ ಕೆಲಸ ನಿರ್ವಹಿಸುತ್ತಿದ್ದರು. ದಂಪತಿಗಳ ದುಡುಕಿನಿಂದ ಇದೀಗ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ಐ ತೇಜಸ್ವಿ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group