➤➤ ವಿಶೇಷ ಲೇಖನ ಜೂ. 14- “ವಿಶ್ವ ರಕ್ತದಾನಿಗಳ ದಿನ” ✍ ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 14.  ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ. ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ “ರಕ್ತದಾನ” ಎನ್ನುವರು. ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳು ಒದಗುತ್ತಲೇ ಇರುತ್ತದೆ. ಜೊತೆಯಲ್ಲಿ ಅರ್ಬುಧ ರೋಗಿಗಳು, ಹಿಮೋಫೀಲಿಯಾ, ಥಾಲೆಸೆಮಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಭಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ರಿಂದ 40 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ಆ ಬಳಿಕ ಅದು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಜನತೆ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ ರಕ್ತನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ.

 

ದಿನದ ಮಹತ್ವ

ರಕ್ತದ ಗುಂಪನ್ನು ಕಂಡು ಹಿಡಿದು, ರಕ್ತವನ್ನು ಎಬಿಒ ಗುಂಪುಗಳಾಗಿ ವರ್ಗೀಕರಣ ಮಾಡುವ ಸಂಶೋಧನೆ ನಡೆಸಿ ರಕ್ತ ಪೂರಣ ಚಿಕಿತ್ಸಾ ಕ್ರಮಕ್ಕೆ ಅಡಿಪಾಯ ಹಾಕಿದ ಖ್ಯಾತ ವಿಜ್ಜಾನಿ ಡಾ: ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಸ್ಮರಣಾರ್ಥವಾಗಿ ಅವರ ಜನ್ಮ ದಿನವಾದ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 2004 ರಿಂದ ಈ ಆಚರಣೆ ಆರಂಭಿಸಲಾಗಿದೆ. ಒಂದು ದೇಶದ ವಾರ್ಷಿಕ ರಕ್ತದ ಅವಶ್ಯಕತೆಯು ಆ ದೇಶದ ಒಟ್ಟು ಜನ ಸಂಖ್ಯೆಯ ಶೇಕಡ 1 ರಷ್ಟು ಇರುತ್ತದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಈ ನಿಟ್ಟಿನಲ್ಲಿ ಭಾರತದ ಜನ ಸಂಖ್ಯೆಯ ಒಂದು ಶೇಕಡ ಅಂದರೆ 140 ಕೋಟಿಯಲ್ಲಿ ಸರಾಸರಿ ವಾರ್ಷಿಕವಾಗಿ 10.4 ಕೋಟಿ ರಕ್ತದ ಯುನಿಟ್‍ಗಳ ಅವಶ್ಯಕತೆ ಇರುತ್ತದೆ. ಆದರೆ ಖೇದಕರ ವಿಚಾರವೆಂದರೆ ನಮ್ಮ ಭಾರತ ದೇಶದಲ್ಲಿ ಮಾಸಿಕವಾಗಿ 70 ರಿಂದ 90 ಲಕ್ಷ ಯುನಿಟ್‍ಗಳಷ್ಟು ರಕ್ತ ಮಾತ್ರ ಶೇಖರಣೆಯಾಗುತ್ತಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣದಿಂದ ರಕ್ತದ ಅನಿವಾರ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಜನರನ್ನು ಸ್ವಯಂ ಪ್ರೇರಿತ, ರಕ್ತದಾನಿಯಾಗಲು ಪ್ರೇರೇಪಿಸುವ ಉದ್ದೇಶದಿಂದ “ವಿಶ್ವ ರಕ್ತದಾನಿಗಳ ದಿನ” ಎಂದು ಜೂನ್ 14 ರಂದು ಆಚರಿಸಿ ರಕ್ತದಾನಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಆಚರಣೆ ಹೊಂದಿದೆ.

Also Read  ಧರ್ಮಸ್ಥಳ ಮಂಜುನಾಥ ಮಹಿಮೆ

 

ನಿಮಗಿದು ತಿಳಿದಿರಲಿ. . . . .

– ರಕ್ತಕ್ಕೆ ಪರ್ಯಾಯವಾದ (ಬದಲಿಯಾದ) ವಸ್ತುವಿಲ್ಲ.

– ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.

– ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು.

– ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ, ದಾನಿಯ ದೇಹದಲ್ಲಿ ರಕ್ತ ಉತ್ಪತ್ತಿಯಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.

– ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ.

– ರಕ್ತದಾನ ಮಾಡುವಾಗ, ಒಂದು ಚುಚ್ಚುಮದ್ದು ತೆಗೆದುಕೊಂಡಷ್ಟೇ ನೋವಿರುತ್ತದೆ.

– ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಕೇವಲ 20 ನಿಮಿಷ ಮಾತ್ರ ಸಾಕು.

– ರಕ್ತದಾನ ಮಾಡುವಾಗ ಒಮ್ಮೆಗೆ 350ml ರಕ್ತ ಮಾತ್ರ ತೆಗೆಯಲಾಗುವುದು. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್ ರಕ್ತ ಇರುತ್ತದೆ.

– ರಕ್ತದಾನ ಮಹಾದಾನ, ಇದಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ.

 

ಯಾರು ರಕ್ತದಾನ ಮಾಡಬಹುದು ?

 ಹೆಣ್ಣು ಗಂಡೆಂಬ ಬೇಧ ಭಾವವಿಲ್ಲದೇ 18 ರಿಂದ 6 5 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.

 ಗಂಡಸರು 3 ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು 6 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು.

 ರಕ್ತದಾನಿಯ ತೂಕ ಕನಿಷ್ಠ 45 ಕೆ.ಜಿ ಗಿಂತ ಜಾಸ್ತಿ ಇರಬೇಕು.

 ರಕ್ತದಾನಿಯ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.

ಯಾರು ರಕ್ತದಾನ ಮಾಡಬಾರದು ?

  • ಅತಿಯಾದ ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಅನಿಯಂತ್ರಿತ ಸಕ್ಕರೆ ಕಾಯಿಲೆಯಿಂದ ಬಳಲುವವರು ರಕ್ತದಾನ ಮಾಡಬಾರದು.
  • ಮಧ್ಯಪಾನ ಮತ್ತು ಮಾಧಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು.
  • ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿದ್ದಾಗ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು.
  • ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೆ, ಅಂತವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು.
  • ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಚಿಕಿತ್ಸೆ ಪಡೆದ ನಂತರದ 3 ತಿಂಗಳು ರಕ್ತದಾನ ಮಾಡಬಾರದು.
  • ಹಿಂದಿನ 3 ತಿಂಗಳಲ್ಲಿ ತಾವೇ ಯಾವುದೇ ರಕ್ತ ಅಥವಾ ರಕ್ತದ ಅಂಶ ಪಡೆದಿದ್ದರೆ ಅಂತಹವರು ರಕ್ತದಾನ ಮಾಡಬಾರದು.
  • ಕಾಮಾಲೆ, ಹೆಚ್.ಐ.ವಿ. ಮತ್ತು ಯಾವುದೇ ಲೈಂಗಿಕ ರೋಗವಿರುವವರು ರಕ್ತದಾನ ಮಾಡಬಾರದು.
  • ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 6 ತಿಂಗಳವರೆಗೆ ಮಾತ್ರ ಚಿಕ್ಕ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾದವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡಬಾರದು.
  • ಅರ್ಬುದ ರೋಗ, ಹೃದಯ ಸಂಬಂಧಿ ಕಾಯಿಲೆ, ಅಸಹಜ ರಕ್ತಸ್ತ್ರಾವ, ಮಧುಮೇಹ, ಮೂತ್ರಪಿಂಡದ ಕಾಯಿಲೆ ಮತ್ತು ಯಕೃತ್, ಲಿವರ್‍ ಗೆ ಸಂಬಂಧಿಸಿದ ಕಾಯಿಲೆ ಇರುವವರು, ಹೆಪಟೈಟಿನ್ ‘ಬಿ’ ಮತ್ತು ‘ಸಿ’ ಕಾಯಿಲೆಯಿರುವವರು ರಕ್ತದಾನ ಮಾಡಬಾರದು.
Also Read  ಜೀವನದಲ್ಲಿ ಪ್ರೀತಿ ಪ್ರೇಮ, ವ್ಯಾಪಾರ,ಮದುವೆ, ಅಡೆತಡೆಗಳಿಂದ ಮುಕ್ತಿ ಪಡೆಯಲು ಇದನ್ನು ಒಮ್ಮೆ ಪಾಲಿಸಿರಿ ಸಾಕು

ಪರೀಕ್ಷೆಗೆ ಒಳಪಡದ ರಕ್ತದ ಮೂಲಕ ಹರಡಬಹುದಾದ ರೋಗಗಳು :

  • ಮಲೇರಿಯಾ
  • ಲೈಂಗಿಕ ಸಂಪರ್ಕದ ರೋಗಗಳು – ಸಿಫಿಲಿಸ್ ಇತ್ಯಾದಿ.
  • ಹೆಪಟೈಟಿನ್ ‘ಬಿ’ ಮತ್ತು ‘ಸಿ’ ಸೋಂಕಿನಿಂದುಂಟಾಗುವ ಕಾಮಾಲೆ ರೋಗ.
  • ಹೆಚ್.ಐ.ವಿ ಸೋಂಕು ಮತ್ತು ಏಡ್ಸ್ ರೋಗ.

ರಕ್ತವನ್ನು ಯಾವುದೇ ವ್ಯಕ್ತಿಗೆ ನೀಡುವ ಮೊದಲು ರಕ್ತದ ಮೇಲಿನ ಎಲ್ಲಾ ರೋಗಗಳಿಂದ ಮುಕ್ತವಾಗಿದೆ ಎಂದು ತಿಳಿಯಲು ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗುತ್ತದೆ. ಈ ಕಾರಣಕ್ಕಾಗಿಯೇ ಬದಲಿ ರಕ್ತ ನೀಡಿದರೂ ಒಂದು ಬಾಟಲ್ (350) ರಕ್ತಕ್ಕೆ ಕನಿಷ್ಠ 300 ರಿಂದ 500 ರೂಪಾಯಿ ವೆಚ್ಚ ತಗಲುತ್ತದೆ.

ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳು :

(1) ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಸಿಗುತ್ತದೆ.

(2) ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ, ಜಾಪಕ ಶಕ್ತಿ ವೃದ್ಧಿಯಾಗುತ್ತದೆ.

(3) ದೇಹದಲ್ಲಿ ಕೊಬ್ಬಿನ ಅಂಶ (ಕೊಲೆಸ್ಟ್ರಾಲ್) ಕಡಿಮೆ ಮಾಡಲು ಸಹಾಯಕವಾಗುತ್ತದೆ.

(4) ಹೃದಯಾಘಾತವನ್ನು ಶೇ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯಕವಾಗುತ್ತದೆ.

(5) ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

(6) ಎಲ್ಲಕ್ಕಿಂತ ಮಿಗಿಲಾಗಿ ಒಂದು ‘ಜೀವ’ ಉಳಿಸಿದಂತಾಗುತ್ತದೆ.

ನೆನಪಿರಲಿ. . . . . .

ರಕ್ತದಾನ ಮಹಾದಾನ , ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ. ರಕ್ತದಾನ ಮಾಡಿ ಜೀವದಾನ ನೀಡಿ.  

ಕೊನೆ ಮಾತು:

ರಕ್ತ ನಮ್ಮ ದೇಹದಲ್ಲಿ ರಕ್ತನಾಳದೊಳಗೆ ಹರಿದಾಡುವ ಜೀವ ದ್ರವ್ಯವಾಗಿದ್ದು, ಒಬ್ಬ ವ್ಯಕ್ತಿಯ ದೇಹದಲ್ಲಿ ಆತನ ದೇಹದ ತೂಕದ 7 ರಿಂದ 8 ಶೇಕಡದಷ್ಟು ರಕ್ತ ಇರುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 5 ರಿಂದ 5.5 ಲೀಟರ್  ನಷ್ಟು ರಕ್ತವಿದ್ದು ಒಮ್ಮೆ ದಾನ ಮಾಡುವಾಗ 350 ರಿಂದ 400 ಒಐ ರಕ್ತವನ್ನು ಯಾವುದೇ ತೊಂದರೆ ಇಲ್ಲದೆ ದಾನ ಮಾಡಬಹುದಾಗಿದೆ. ರಕ್ತದಲ್ಲಿ ಬಿಳಿ ರಕ್ತ ಕಣ, ಕೆಂಪು ರಕ್ತ ಕಣ, ಪ್ಲೆಟ್‍ಲೇಟ್ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಘಟಕಗಳಿವೆ. ದಾನಿಗಳು ಇಡೀ ರಕ್ತವನ್ನು ದಾನ ಮಾಡಬಹುದು. ಇಲ್ಲವೆ ರಕ್ತದ ಯಾವುದೇ ಘಟಕಗಳನ್ನು ಕೂಡ ದಾನ ಮಾಡಬಹುದಾಗಿದೆ. ಘಟಕಗಳಾಗಿ ದಾನ ಮಾಡುವಾಗ ಬರೀ ಪ್ಲೆಟ್‍ಲೇಟ್ ಘಟಕ, ಕ್ರಯೋಪ್ರೆಸಿಪಿಟೇಟ್ ಎಂಬ ಘಟಕ ಮತ್ತು ಪ್ಲಾಸ್ಮಾ ಘಟಕ ಎಂಬುದಾಗಿ ವಿಂಗಡಣೆ ಮಾಡಿ ರೋಗಿಯ ಅವಶ್ಯಕತೆಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ದಾನವಾಗಿ ಪಡೆದ ಪ್ಲೆಟ್‍ಲೇಟ್‍ಗಳ ಜೀವಿತಾವಧಿ 5 ದಿನಗಳಾಗಿರುತ್ತದೆ. ಮತ್ತು ಇಡೀ ರಕ್ತದ ಬಾಳಿಕೆ ಅವಧಿ 35 ರಿಂದ 42 ದಿವಸಗಳಾಗಿರುತ್ತದೆ. ರಕ್ತದಾನ ಎನ್ನುವುದು ಬಹಳ ಪವಿತ್ರ ದಾನವಾಗಿದ್ದು ನೀವು ನೀಡಿದ ರಕ್ತದಿಂದ ಇನ್ನೊಬ್ಬ ರೋಗಿಯ ಜೀವ ಉಳಿಯುವುದರ ಜೊತೆಗೆ ನೀವು ಆತನಿಗೆ ರಕ್ತ ಸಂಬಂದಿಯಾಗುವ ಉಚಿತ ಅವಕಾಶವು ಲಭಿಸುತ್ತದೆ. ನಾವೆಲ್ಲ ಅವಕಾಶ ಸಿಕ್ಕಿದಾಗಲೆಲ್ಲ ಅವಶ್ಯ ಇರುವ ರೋಗಿಗಳಿಗೆ ರಕ್ತ ನೀಡಿ ರಕ್ತ ಸಂಬಂಧಿಗಳಾಗೋಣ ಮತ್ತು ವಿಶ್ವ ಭಾತೃತ್ವವನ್ನು ಎತ್ತಿ ಹಿಡಿಯೋಣ. ಅದರಲ್ಲಿಯೇ ವಿಶ್ವ ಶಾಂತಿ ಮತ್ತು ವಿಶ್ವದ ನೆಮ್ಮದಿ ಅಡಗಿದೆ.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top