ಸುಳ್ಯ ತಾಲೂಕು ಆಸ್ಪತ್ರೆಯ ಯುವವೈದ್ಯೆ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 07. ಸುಳ್ಯ ತಾಲೂಕು ಆಸ್ಪತ್ರೆಯ ಯುವ ವೈದ್ಯೆಯೋರ್ವರು ಕಾಸರಗೋಡಿನ ನೀರ್ಚಾಲಿನಲ್ಲಿರುವ ತನ್ನ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕನ್ಯಪ್ಪಾಡಿ ನಿವಾಸಿ ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಗೋಪಾಲಕೃಷ್ಣ ಭಟ್‌ ಅವರ ಪುತ್ರಿ ಡಾ| ಪಲ್ಲವಿ ಜಿ.ಕೆ. ಎಂದು ಗುರುತಿಸಲಾಗಿದೆ. ಜೂ. 5ರ ರಾತ್ರಿ ಊಟದ ಬಳಿಕ ನಿದ್ದೆ ಮಾಡಿದ್ದ ಪಲ್ಲವಿ ಮಂಗಳವಾರ ಬೆಳಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ಕಿಟಕಿ ಸರಳಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್‌ ಕೋರ್ಸ್‌ ಪೂರ್ತಿಗೊಳಿಸಿದ ಪಲ್ಲವಿ, ಬಳಿಕ ರೂರಲ್‌ ಸರ್ವೀಸ್‌ನ ಅಂಗವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದರು. ಬಳಿಕ ಎಂ.ಡಿ. ಕೋರ್ಸ್‌ನ ಪರೀಕ್ಷೆ ಬರೆಯಲು ಅಲ್ಲಿಂದ ರಜೆಯಲ್ಲಿ ತೆರಳಿದ್ದರು. ಪರೀಕ್ಷೆಯ ಬಳಿಕ ಮನೆಗೆ ಬಂದಿದ್ದರು. ಎಂಡಿ ಕೋರ್ಸ್‌ನಲ್ಲಿ ನಿರೀಕ್ಷಿಸಿದಷ್ಟು ಅಂಕ ಸಿಗದಿರುವುದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಬದಿಯಡ್ಕ ಪೊಲೀಸರು ಮೃತದೇಹದ ಮಹಜರು ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

error: Content is protected !!

Join the Group

Join WhatsApp Group