ಮಂಗಳೂರು: ಪತ್ನಿಯ ಜೊತೆ ಅಕ್ರಮ ಸಂಬಂಧ ಶಂಕೆ ➤ ಪ.ಬಂಗಾಳದ ಯುವಕನ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 05. ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿರುವುದಾಗಿ ಸಂಶಯಿಸಿದ ವ್ಯಕ್ತಿಯೊಬ್ಬ ಯುವಕನ ಎದೆಗೆ ರಾಡ್‌ನಿಂದ ಹೊಡೆದು ಕೊಲೆಗೈದ ಘಟನೆ ಕೂಳೂರಿನಿಂದ ವರದಿಯಾಗಿದೆ.

ಕೊಲೆಯಾದ ಯುವಕನನ್ನು ಮೂಲತಃ ಪಶ್ಚಿಮ ಬಂಗಾಳದ ಪ್ರಸ್ತುತ ಕುಳೂರಿನಲ್ಲಿ ವಾಸವಾಗಿರುವ ಬಿಕಾಸ್ ಗುನಿಯಾ (22) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪಶ್ಚಿಮ ಬಂಗಾಳದ ವಾಸುದೇವ ಗುನಿಯಾ (34) ಎಂದು ‌ಪೊಲೀಸರು ತಿಳಿಸಿದ್ದು, ಆತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೃತ ಬಿಕಾಸ್ ಗುನಿಯಾ ಮತ್ತು ಆರೋಪಿ ವಾಸುದೇವ ಗುನಿಯಾ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಕೂಳೂರಿನಲ್ಲಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ವಾಸುದೇವ ಗುನಿಯಾ ಎಂಬಾತನಿಗೆ ಬಿಕಾಸ್ ಗುನಿಯಾ ಊರಿನ ಯುವತಿಯ ಜತೆ ಹಲವು ವರ್ಷದ ಹಿಂದೆ ಮದುವೆಯಾಗಿತ್ತು. ಆತನ ಪತ್ನಿ ಪಶ್ಚಿಮ ಬಂಗಾಳದಲ್ಲೇ ವಾಸವಾಗಿದ್ದಳು. ಆದರೆ ಆಕೆಯ ಜತೆ ಬಿಕಾಸ್ ಗುನಿಯಾನಿಗೆ ಅಕ್ರಮ ಸಂಬಂಧವಿದ್ದು, ಮೊಬೈಲ್ ಮೂಲಕ ಮಾತನಾಡುತ್ತಾನೆ ಎಂಬ ಸಂಶಯ ವ್ಯಕ್ತಪಡಿಸಿದ ಆರೋಪಿಯು ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ಕೂಡಾ ಮಾಡಿದ್ದ ಎನ್ನಲಾಗಿದೆ. ರವಿವಾರ ಮಧ್ಯಾಹ್ನದ ವೇಳೆಗೆ ಪಾನಮತ್ತನಾಗಿ ಬಂದ ವಾಸುದೇವ, ಬಿಕಾಸ್ ಜತೆ ಅಕ್ರಮ ಸಂಬಂಧದ ವಿಚಾರವಾಗಿ ತಗಾದೆ ತೆಗೆದಿದ್ದು ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆರೋಪಿ ವಾಸುದೇವ ರಾಡ್‌ನಿಂದ ಬಿಕಾಸ್‌ ಎದೆಗೆ ಗುದ್ದಿದ್ದಾನೆ ಎನ್ನಲಾಗಿದೆ.‌ ಪರಿಣಾಮ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group