ಜೇಸಿಐ ನೆಕ್ಕಿಲಾಡಿ ಘಟಕದಿಂದ ರಾಷ್ಟ್ರೀಯ ಯುವ ದಿನಾಚರಣೆ ► ಯುವ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವಾಗಲಿ: ಸವಿತಾ ಪಿ.ಜಿ. ಭಟ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಸ್ವಾಮಿ ವಿವೇಕಾನಂದರ ಆಚರಣೆಗಳೇ ಅವರ ಬೋಧನೆಯಾಗಿತ್ತು. ಆದ್ದರಿಂದ ಅವರ ತತ್ವ ಸಿದ್ದಾಂತಗಳು ನಮಗ್ಯಾವತ್ತೂ ಅನುಕರಣೀಯ. ಯುವ ಸಮೂಹದಿಂದ ಮಾತ್ರ ದೇಶದ ಬದಲಾವಣೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಉತ್ತಮ ವಿಚಾರಗಳ ಮೂಲಕ ಯುವ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯ ನಮ್ಮೆಲ್ಲರಿಂದಾಗಬೇಕು ಎಂದು ಮಹಿಳಾ ಪರ ಚಿಂತಕಿ ಸವಿತಾ ಪಿ.ಜಿ. ಭಟ್ ತಿಳಿಸಿದರು.

ಸ್ವಾಮಿ ವಿವೇಕಾನಂದರ 155ನೇ ಜಯಂತಿಯ ಅಂಗವಾಗಿ ಜೇಸಿಐ ನೆಕ್ಕಿಲಾಡಿ ಘಟಕ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್, ರೆಡ್ ಕ್ರಾಸ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ `ಪ್ರೇರಣಾ’ ನ್ಯಾಷನಲ್ ಯೂತ್ ಡೇ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು. ವಿದ್ಯಾರ್ಥಿಗಳು ನೈತಿಕವಾಗಿ, ಸಾಂಸ್ಕೃತಿಕವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಬೆಳವಣಿಗೆ ಪ್ರತಿಯೋರ್ವರ ಕೈಯಲ್ಲೂ ಅಡಗಿದ್ದು, ಅದನ್ನು ವಿದ್ಯೆಯಿಂದ, ಜ್ಙಾನದಿಂದ ಪಡೆದುಕೊಂಡು ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂದ ಅವರು, ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಮಾರ್ಗಗಳು, ಅವರು ಸಮಾಜಕ್ಕೆ ನೀಡಿದ ತತ್ವಗಳು ನಿತ್ಯನೂತನ. ಅವರ ಚಿಂತನೆಗಳನ್ನು ಯುವ ಪೀಳಿಗೆ ಅರಿತು ಮುನ್ನಡೆದಾಗ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡಿ, ಚಿಕಾಗೋದಲ್ಲಿ ಭಾರತೀಯರ ಜೀವನ ಮೌಲ್ಯವನ್ನು ಮತ್ತು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಜಗತ್ತಿಗೆ ತೋರಿಸಿಕೊಟ್ಟ ವಿವೇಕಾನಂದರು ನಿಜಾರ್ಥದಲ್ಲಿ ವಿಶ್ವಮಾನವರು. ಆದ್ದರಿಂದ ಅವರು ಯಾವುದೇ ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಅವರ ತತ್ವ ಚಿಂತನೆಗಳ ಸಾಮರಸ್ಯದ ಭಾರತ ಕಟ್ಟಲು ನಾವೆಲ್ಲಾ ಮುಂದಾಗಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜೇಸಿಐ 15ರ ವಲಯಾಧಿಕಾರಿ ಶಿವಕುಮಾರ್ ಬಾರಿತ್ತಾಯ ಹಾಗೂ ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷೆ ಅಮಿತಾ ಹರೀಶ್ ಮಾತನಾಡಿ ಶುಭ ಹಾರೈಸಿದರು. ಜೇಸಿಐ ನೆಕ್ಕಿಲಾಡಿ ಘಟಕದ ಸದಸ್ಯ ವಿನೀತ್ ಶಗ್ರಿತ್ತಾಯ ಜೇಸಿವಾಣಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಾಲಾಜಿ ಎಂ.ಪಿ. ಸ್ವಾಗತಿಸಿದರು. ಉಪನ್ಯಾಸಕಿ ವೀಣಾ ವಂದಿಸಿದರು. ವಿದ್ಯಾರ್ಥಿನಿ ನಿಧಿ ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ನೆಕ್ಕಿಲಾಡಿ ಘಟಕದ ಸದಸ್ಯೆ ಅನಿ ಮಿನೇಜಸ್ ಸಹಕರಿಸಿದರು.

error: Content is protected !!

Join the Group

Join WhatsApp Group