ಜೇಸಿಐ ಕಡಬ ಕದಂಬ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ► ವಿವೇಕಾನಂದರ ಚಿಂತನೆಗಳು ಯುವ ಸಮುದಾಯಕ್ಕೆ ದಾರಿದೀಪ: ಫಾ| ಆ್ಯಂಟನಿ

(ನ್ಯೂಸ್ ಕಡಬ) newskadaba.com ಕಡಬ, ಜ. 12. ಸ್ವಾಮಿ ವಿವೇಕಾನಂದರು ತಮ್ಮ ತಮ್ಮ ಶಕ್ತಿಯುತ ಚಿಂತನೆಗಳಿಂದ ಮತ್ತು ಸ್ಫೂರ್ತಿದಾಯಕ ನಡವಳಿಕೆಯಿಂದ ಇಂದಿಗೂ ನಮ್ಮನ್ನು ಸೆಳೆಯುತ್ತಿದ್ದಾರೆ. ಅವರ ಚಿಂತನೆಗಳು ಯುವ ಸಮುದಾಯಕ್ಕೆ ದಾರಿದೀಪ ಎಂದು ನೂಜಿಬಾಳ್ತಿಲದ ಬೆಥನಿ ಪ.ಪೂ.ಕಾಲೇಜಿನ ನಿರ್ದೇಶಕ ವಂ|ಆ್ಯಂಟನಿ ನಿರಂಞಪಳ್ಳಿ ಅವರು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಹಾಗೂ ಯುವ ಜೇಸಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ  ನೂಜಿಬಾಳ್ತಿಲದ ಬೆಥನಿ ಪ.ಪೂ.ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಹಾಗೂ ಪ್ರೇರಣ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ನಿನ್ನ ಏಳಿಗೆಗೆ ನೀನೇ ಶಿಲ್ಪಿ ಎನ್ನುವ ಅವರ ಮಾತುಗಳು ವಿದ್ಯಾರ್ಥಿ ಸಮುದಾಯಕ್ಕೆ ಸ್ಫೂರ್ತಿ ನೀಡುವ ವಾಕ್ಯ. ವಿವೇಕಾನಂದರ ಜನ್ಮ ದಿನಾಚರಣೆಯನ್ನು ನಾವು ಕೇವಲ ಆಚರಿಸಿದರೆ ಸಾಲದು. ಅವರ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ನಾವು ಅವರನ್ನು ಗೌರವಿಸಬೇಕು ಎಂದು ಫಾ|ಆ್ಯಂಟನಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್. ಅವರು ಮಾತನಾಡಿ ಸ್ವಾಮಿ ವಿವೇಕಾನಂದರ `ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎನ್ನುವ ಸಂದೇಶ ಯುವ ಜನರಿಗೆ ಸ್ಪೂರ್ತಿಯ ಸೆಲೆಯಾಗಿದೆ. ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಇರಿಸಿಕೊಂಡು ಶ್ರೇಷ್ಠವಾದ ಚಿಂತನೆಗಳಿಂದ ಮುಂದುವರಿದಾಗ ಜೀವನದಲ್ಲಿ ಅದ್ಭುತ ಯಶಸ್ಸನ್ನು ಕಾಣಲು ಸಾಧ್ಯ ಎಂದರು. ಜೇಸಿ ಘಟಕಾಧ್ಯಕ್ಷ ವೆಂಕಟೇಶ್ ಪಾಡ್ಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ ಜೇಸಿ ವಲಯ ತರಬೇತುದಾರ ಪ್ರದೀಪ್ ಬಾಕಿಲ ಅವರು ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಜೇಸಿ ಘಟಕದ ನಿಕಟಪೂರ್ವಾಧ್ಯಕ್ಷ

ತಸ್ಲೀಂ ಮರ್ದಾಳ, ಪೂರ್ವಾಧ್ಯಕ್ಷರಾದ ಅಶೋಕ್ ಕುಮಾರ್ ಪಿ., ಜಯರಾಮ ಆರ್ತಿಲ, ದಿನೇಶ್ ಆಚಾರ್ಯ, ಉಪಾಧ್ಯಕ್ಷ ತಿರುಮಲೇಶ್ ಭಟ್ ಹೊಸ್ಮಠ, ಯುವಜೇಸಿ ಅಧ್ಯಕ್ಷೆ ರಕ್ಷಿತಾ ಎನ್.ಆರ್. ಉಪಸ್ಥಿತರಿದ್ದರು. ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಸ್ವಾಗತಿಸಿ, ಪ್ರಸ್ತಾವನೆಗೈದರು. ಘಟಕದ ಕಾರ್ಯದರ್ಶಿ ಮೋಹನ್ ಕೋಡಿಂಬಾಳ ಜೇಸಿವಾಣಿ ವಾಚಿಸಿದರು. ಬೆಥನಿ ಪ್ರೌಢಶಾಲಾ ಮುಖ್ಯಶಿಕ್ಷಕ ಥಾಮಸ್ ಎ.ಕೆ. ವಂದಿಸಿದರು.

 

error: Content is protected !!

Join the Group

Join WhatsApp Group