ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಡಾ| ರಘು ನಿರಂತರ ಸೋತ ಹಿನ್ನೆಲೆ ►ಕಾಂಗ್ರೆಸ್ ಅಭ್ಯರ್ಥಿಯಾಗಿ ಶಶಿಧರ್ ಬೊಟ್ಟಡ್ಕರವರಿಗೆ ಸೀಟು ನೀಡಲು ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜ.10. ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಸುಳ್ಯದಿಂದ ನಿರಂತರ 3 ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿರುವ ಡಾ|ರಘು ಅವರ ಬದಲಿಗೆ ದಲಿತ ಮುಖಂಡ, ಕಡಬ ಬ್ಲಾಕ್ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಅವರನ್ನು ಸುಳ್ಯ ಕ್ಷೇತ್ರಕ್ಕೆ  ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಿಗಣಿಸಬೇಕೆಂದು ಕಡಬದ ಯುವ ದಲಿತ ಮುಖಂಡ ವಸಂತ ಕುಬಲಾಡಿ ಅವರು ಆಗ್ರಹಿಸಿದ್ದಾರೆ.

ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಡಾ|ರಘು ಅವರು ಅಭ್ಯರ್ಥಿಯಾಗಿ 3 ಬಾರಿ ಸ್ಪರ್ಧಿಸಿದರೂ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದುದರಿಂದ ಹೊಸಮುಖವನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆಲುವು ಸಾಧಿಸಲು ಪೂರಕವಾಗಬಹುದು. ಕಾಂಗ್ರೆಸ್ ಪಕ್ಷದ ನಿಯಮದಂತೆ 2 ಬಾರಿ ಸೋತ ಅಭ್ಯರ್ಥಿಯಾಗಿ ಮತ್ತೆ ಅವಕಾಶ ನೀಡುವಂತಿಲ್ಲ. ಆದುದರಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ಮಾಜಿ ಮಂಡಲ ಪ್ರಧಾನರಾಗಿ ಕೆಲಸ ಮಾಡಿರುವ ದಲಿತ ಮುಖಂಡ ಶಶಿಧರ ಬೊಟ್ಟಡ್ಕ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಿಗೂ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಶಶಿಧರ ಬೊಟ್ಟಡ್ಕ ಅವರನ್ನು ಕಣಕ್ಕಿಳಿಸಿದಲ್ಲಿ ದಲಿತ ಸಂಘರ್ಷ ಸಮಿತಿಯು ಅವರು ಗೆಲುವಿಗೆ ಸಂಪೂರ್ಣವಾಗಿ ಶ್ರಮಿಸುವ ಭರವಸೆ ನೀಡಿದ ವಸಂತ ಕುಬುಲಾಡಿ ನಮ್ಮ ಮನವಿಗೆ ಸ್ಪಂದಿಸದೆ ಮತ್ತೆ ಡಾ|ರಘು ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಲ್ಲಿ ಚುನಾವಣೆಯ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದೋ ಅಥವಾ  ಜಾತ್ಯಾತೀತ ನಿಲುವಿನ ಇತರ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದೋ ಎಂದು ಆಲೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುಳ್ಯದ ಮೀಸಲು ಕ್ಷೇತ್ರದ ಸ್ಥಾನಮಾನವನ್ನು ಬದಲಾಯಿಸಿ ಬೇರೆಡೆಗೆ ನೀಡಿ ಸುಳ್ಯವನ್ನು ಸಾಮಾನ್ಯ ಕ್ಷೇತ್ರವಾಗಿಸಬೇಕೆಂಬ ಕೆಲವರ ಬೇಡಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಅವರು ಈ ರೀತಿಯ ದಲಿತ ವಿರೋಧಿ ಪ್ರಯತ್ನ ಸಂವಿಧಾನ ಬಾಹಿರ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ದಲಿತಪರ ಸಂಘಟನೆಗಳ ಪದಾಧಿಕಾರಿಗಳಾದ ದಿನೇಶ್ ಬಿ. ಕೊಂಬಾರು ಹಾಗೂ ಕಮಲಾಕ್ಷ ಬಿ. ಬೊಟ್ಟಡ್ಕ ಅವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group