ಸವಣೂರು: ಜಿಲ್ಲಾ ಯುವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಸವಣೂರು, ಜ.07. ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಮೇಳ ಸಂಘಟನಾ ಸಮಿತಿ ಇದರ ವತಿಯಿಂದ ಕೊಡಮಾಡುವ ಜಿಲ್ಲಾ ಯುವಜನ ಒಕ್ಕೂಟದ ಪ್ರಶಸ್ತಿಯನ್ನು ಸವಣೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವಜನಮೇಳದ ಸಂದರ್ಭ ಪ್ರದಾನಿಸಲಾಯಿತು. ಯುವಜನ ಚಟುವಟಿಕೆ, ಕಲೆ, ಸಾಮಾಜಿಕ ಬದ್ಧತೆ, ಸಂಘಟನೆ ಮೂಲಕ ಗಣನೀಯ ಸೇವೆ ಸಲ್ಲಿಸುತ್ತಿರುವ ದ.ಕ. ಜಿಲ್ಲೆಯ 5 ಯುವಕ ಮಂಡಲಗಳನ್ನು ಅತ್ಯುತ್ತಮ ಸಂಘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬೆಳ್ಳಾರೆ ಸ್ನೇಹಿತರ ಕಲಾ ಸಂಘ, ನೆಲ್ಯಾಡಿಯ ಗೆಳೆಯರ ಬಳಗ, ಬೆಳ್ತಂಗಡಿ ತಾಲೂಕಿನ ಕಾನರ್ಪ ಚಿರಂಜೀವಿ ಯುವಕ ಮಂಡಲ, ಬಂಟ್ವಾಳ ತಾಲೂಕಿನ ಕುಲಾಳು ಶ್ರೀ ವಾರಾಹಿ ಯುವಕ ಮಂಡಲ, ಮಂಗಳೂರು ತಾಲೂಕಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ರ್ಸ್‌ ಕ್ಲಬ್ ತಂಡಗಳಿಗೆ ಪುತ್ತೂರು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಸ್ಮರಣಿಕೆ ನೀಡಿ ಅಭಿನಂದಿಸಿದರು. ಅಳಿಕೆ ನವಚೇತನ ಯುವತಿ ಮಂಡಲದ ಅಧ್ಯಕ್ಷೆ ಅಮಿತಾ ಸಂಜೀವ ಮಿತ್ತಳಿಕೆ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ರ್ಸ್‌ ಕ್ಲಬ್ನ ಜತೆ ಕಾರ್ಯದರ್ಶಿ ಸಂಪತ್ ಕುಮಾರ್, ಗುರುಮಿತ್ರ ಸಮೂಹ ಸಂಘದ ಅಧ್ಯಕ್ಷ ಸ್ಮಿತೇಶ್ ಬಾರ್ಯ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಿನೇಶ್ ಮೆದು, ಗುತ್ತಿಗಾರು ಶಂಖಪಾಲ ಕ್ರೀಡಾ ಕ್ಲಬ್ನ ಸ್ಥಾಪಕಾಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆಯವರಿಗೆ ಮಾಧವ ಗೌಡ ಕಾಮಧೇನು ಜಿಲ್ಲಾ ಯುವ ಪ್ರಶಸ್ತಿ ನೀಡಿ ಗೌರವಿಸಿದರು.

ಸನ್ಮಾನ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಯುವಕರು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾರ್ಥರಹಿತ, ಸಮರ್ಪಣಾ ಭಾವದೊಂದಿಗೆ ತೊಡಗಿಸಿಕೊಂಡು, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಂಡು ಯುವಜನಾಂಗ ಮುಂದುವರಿಯಬೇಕೆಂದರು. ತಾಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್ ಮಾತನಾಡಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರ ನೇತೃತ್ವದಲ್ಲಿ ಒಕ್ಕೂಟದ ವತಿಯಿಂದ ಉತ್ತಮ ಕಾರ್ಯಗಳಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಷ್ಕ್ರಿಯಗೊಂಡ ಯುವಕ-ಯುವತಿ ಮಂಡಲಗಳನ್ನು ಮತ್ತೆ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯೋನ್ಮುಖವಾಗಬೇಕೆಂದು ಅಭಿಪ್ರಾಯಪಟ್ಟರು. ಯುವಕ ಯುವತಿಯರು ಯುವಜನಮೇಳಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಲ್ಲಿ ಸಾಕಷ್ಟು ಅನುಭವಗಳನ್ನು ಪಡೆಯಬಹುದು. ಧೈರ್ಯ, ತಾಳ್ಮೆ, ಸಹನೆ, ಸಂಘಟನೆ ಕುರಿತಾಗಿ ಪ್ರಾಯೋಗಿಕವಾಗಿ ತಿಳಿಯಬಹುದು ಎಂದು ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಹೇಳಿದರು. ಪುತ್ತೂರು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ, ಪುತ್ತೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕೆ., ಸದಸ್ಯೆ ಲಲಿತಾ ಈಶ್ವರ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ಮಾಮಚ್ಚನ್ ಎಂ., ದೇವರಾಜ್ ಮುತ್ಲಾಜೆ, ನವೀನ್, ಲಿಲ್ಲಿ ಪಾಯಸ್, ಉದ್ಯಮಿ ಮಾಧವ ಗೌಡ ಕಾಮಧೇನು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಪನ್ನೆ ಉಪಸ್ಥಿತರಿದ್ದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರೇಶ್ ಸಸಹಿತ್ಲು ನಿರೂಪಿಸಿ, ಸವಣೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು.

error: Content is protected !!

Join the Group

Join WhatsApp Group