ಕೊನೆಗೂ ದೀಪಕ್ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ ► ರುದ್ರಭೂಮಿ ತಲುಪಿದ ದೀಪಕ್ ಮೃತದೇಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರದಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ಬರ್ಬರ ಹತ್ಯೆಗೀಡಾಗಿರುವ ಬಿಜೆಪಿ ಕಾರ್ಯಕರ್ತ ದೀಪಕ್ ಅವರ ಮೃತದೇಹವನ್ನು ಸ್ವೀಕರಿಸುವ ಮೊದಲು ಗೃಹ ಸಚಿವರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದ ದೀಪಕ್ ಕುಟುಂಬ ಸದಸ್ಯರು ಹಾಗೂ ಕಾಟಿಪಳ್ಳ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಸಿಕಾಂತ್ ಸೆಂಥಿಲ್ ಹಾಗೂ ನಗರ ಪೊಲೀಸ್ ಆಯುಕ್ತ ಸುರೇಶ್ ಯಶಸ್ವಿಯಾಗಿದ್ದಾರೆ.

ಸರಕಾರದ ವತಿಯಿಂದ ಆರಂಭದಲ್ಲಿ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಬಡ ಕುಟುಂಬದ ದೀಪಕ್‌ಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿಬಂತು. ಜಿಲ್ಲಾಧಿಕಾರಿ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮತ್ತೆ 5 ಲಕ್ಷ ರೂ. ಘೋಷಿಸುವ ಮೂಲಕ ಒಟ್ಟು 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಮೃತ ದೀಪಕ್ ಅವರ ನಿವಾಸದಿಂದ ರುದ್ರಭೂಮಿಯ ತನಕ ಮುಕ್ಕಾಲು ಕಿ.ಮೀ. ದೂರ ಶವಯಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೃತದೇಹವನ್ನು ವಾಹನದ ಮೂಲಕ ಮೆರವಣಿಗೆಯಲ್ಲಿ ರುದ್ರಭೂಮಿ ಕಡೆಗೆ ಸಾಗಿಸಲಾಯಿತು.

error: Content is protected !!

Join the Group

Join WhatsApp Group