ಕುಡಿದ ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆ ➤ ಮೂವರು ರೌಡಿಶೀಟರ್ ಗಳಿಗೆ ಹಿಗ್ಗಾಮುಗ್ಗ ಥಳಿತ

(ನ್ಯೂಸ್ ಕಡಬ) newskadaba.com ಹೊಳೆನರಸೀಪುರ, ಮಾ. 07. ಕುಡಿದ ಅಮಲಿನಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ಮೂವರು ರೌಡಿಶೀಟರ್‌ಗಳಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.


ಥಳಿತಕ್ಕೊಳಗಾದವರನ್ನು ಎರಡು ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಯಾಚೇನಹಳ್ಳಿ ಚೇತು, ಉಲಿವಾಲ ಚೇತು ಮತ್ತು ನೈಂಟಿ ವಿಶ್ವ ಎಂದು ಗುರುತಿಸಲಾಗಿದೆ. ಇವರು ನಾಲ್ಕು ದಿನದ ಹಿಂದೆ ತಾಲೂಕಿನ ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಡಿ ಗುಬ್ಬಿಯ ಬಾರ್‌ ವೊಂದರಲ್ಲಿ ಕುಡಿದು ಬಿಲ್ ಕೊಡದೆ ಬಾರ್ ಕ್ಯಾಷಿಯರ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಲ್ಲದೇ ಕುಡಿದ ಅಮಲಿನಲ್ಲಿ ಜನರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇವರ ಹುಚ್ಚಾಟದಿಂದ ರೋಸಿ ಹೋಗಿದ್ದ ಸಾರ್ವಜನಿಕರು, ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಬಟ್ಟೆ ಬಿಚ್ಚಿ ರಸ್ತೆಯಲ್ಲೇ ಉರುಳಾಡಿಸಿ ಬಿಸಿ ಮುಟ್ಟಿಸಿದ್ದಾರೆ. ಈ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಇದೀಗ ಬಾರ್ ಕ್ಯಾಷಿಯರ್ ದೂರು ಆಧರಿಸಿ ಮೂವರ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿದ್ದು, ಮೂವರನ್ನು ಬಂಧಿಸಿ ರಾಜ್ಯದ ಬೇರೆ ಬೇರೆ ಜೈಲಿಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.

error: Content is protected !!

Join the Group

Join WhatsApp Group